ADVERTISEMENT

ಮುದಗಲ್ | ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ಚಿಕಿತ್ಸೆಗೆ ತೊಂದರೆ

ಲಿಂಗಸುಗೂರು ತಾಲ್ಲೂಕಿನಲ್ಲಿ ಕಡಿಮೆಯಾಗುತ್ತಿದೆ ಜಾನುವಾರು ಸಂಖ್ಯೆ

ಡಾ.ಶರಣಪ್ಪ ಆನೆಹೊಸೂರು
Published 9 ಅಕ್ಟೋಬರ್ 2025, 6:13 IST
Last Updated 9 ಅಕ್ಟೋಬರ್ 2025, 6:13 IST
ಮುದಗಲ್‌ನ ಪಶು ಆಸ್ಪತ್ರೆ
ಮುದಗಲ್‌ನ ಪಶು ಆಸ್ಪತ್ರೆ   

ಮುದಗಲ್: ಲಿಂಗಸುಗೂರು ತಾಲ್ಲೂಕಿನಲ್ಲಿ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪಶು ಆಸ್ಪತ್ರೆಗಳು ಸಿಬ್ಬಂದಿ ಇಲ್ಲದೆ ಸೊರಗುತ್ತಿವೆ.

ತಾಲ್ಲೂಕಿನಲ್ಲಿ ವೈದ್ಯರು ಮತ್ತು ಡಿ ದರ್ಜೆ ನೌಕರರ ಹುದ್ದೆಗಳು ಬಹುತೇಕ ಖಾಲಿ ಇವೆ. ಅಧಿಕ ಜಾನುವಾರಗಳಿರುವ ಭಾಗದಲ್ಲಂತೂ ವೈದ್ಯರೇ ಇಲ್ಲ. ಈ ವರ್ಷ ಅಧಿಕ ಮಳೆಯಾಗಿದ್ದರಿಂದ ಕುರಿ, ಮೇಕೆಗಳು ಕುಂಟುತ್ತಿವೆ. ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿವೆ. ವೈದ್ಯರಿಲ್ಲದ ಕಾರಣ ಕೆಲ ಕಡೆ ಆಸ್ಪತ್ರೆಯ ನೂತನ ಕಟ್ಟಡಗಳು ಉದ್ಘಾಟನೆಗೊಂಡಿಲ್ಲ.

ಮುದಗಲ್ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಟ್ಟಡವನ್ನು ಇಲಾಖೆ ಅಧಿಕಾರಿಗಳು ಸಮಯಕ್ಕೆ ಉದ್ಘಾಟನೆ ಮಾಡಲಿಲ್ಲ. ಉದ್ಘಾಟನೆಗೆ ಕಾದು ಬೇಸತ್ತ ಆಸ್ಪತ್ರೆ ಸಿಬ್ಬಂದಿ ಹೊಸ ಕಟ್ಟಡ ಪ್ರವೇಶ ಮಾಡಿ ಕೆಲಸ ಪ್ರಾರಂಭಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಹಸು, ಎಮ್ಮೆ, ಮೇಕೆ, ಕುರಿ, ನಾಯಿ, ಹಂದಿ ಸೇರಿದಂತೆ ಇನ್ನಿತರ ಸಾಕು ಪ್ರಾಣಿಗಳಿವೆ. 3.51 ಲಕ್ಷ ಜಾನುವಾರಗಳಿವೆ. ಪಶು ಆಸ್ಪತ್ರೆ ಸೇರಿ 19 ಚಿಕ್ಸಿತಾಲಯಗಳಿವೆ. ಬಹುತೇಕ ಕಡೆಗಳಲ್ಲಿ ವೈದ್ಯರಿಲ್ಲ. ಒಬ್ಬರು ಮುಖ್ಯ ಪಶು ವೈದ್ಯಾಧಿಕಾರಿಗಳಿಲ್ಲ. 10 ಪಶು ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 29 ಜನ ಡಿ ಗ್ರೂಪ್ ಹುದ್ದೆಗಳ ಪೈಕಿ ಏಳು ಹುದ್ದೆಗಳು ಭರ್ತಿಯಾಗಿವೆ. ಪಶು ವೈದ್ಯಕೀಯ ಪರೀಕ್ಷಕರು, ಕಿರಿಯ ಪಶು ವೈದ್ಯಕೀಯ ಪರೀಕ್ಷಕರು ಸೇರಿ ಇನ್ನಿತರ 83 ಹುದ್ದೆಗಳ ಪೈಕಿ 54 ಹುದ್ದೆಗಳು ಖಾಲಿ ಇವೆ.

ಪಶು ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ ಖಾಸಗಿ ವೈದ್ಯರನ್ನೇ ರೈತರು ಅವಲಂಬಿಸುವಂತಾಗಿದೆ. ಕೆಲ ಸಂದರ್ಭದಲ್ಲಿ ದೂರದ ಸರ್ಕಾರಿ ಆಸ್ಪತ್ರೆಗಳಿಗೆ ಜಾನುವಾರುಗಳನ್ನು ಕರೆದೊಯ್ಯುವುದು ಸಾಹಸದ ಕೆಲಸವೇ ಆಗಿದೆ. ಟಾಟಾ ಏಸ್‌ನಂಥ ವಾಹನಗಳನ್ನು ಬಾಡಿಗೆಗೆ ಪಡೆದು ಕರೆದೊಯ್ಯಬೇಕು ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ಜಾನುವಾರುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗುತ್ತದೆ. ಹಸು ಮತ್ತು ಎತ್ತುಗಳಿಗೆ ಮಾತ್ರ ಚರ್ಮಗಂಟು ರೋಗದ ಲಸಿಕೆ ಹಾಕಲಾಗಿದೆ. ಹಳ್ಳಿಗಳಿಗೆ ಬರುವ ಸಿಬ್ಬಂದಿ ಎಲ್ಲಾ ಹಸು ಮತ್ತು ಎಮ್ಮೆಗಳನ್ನು ಹುಡುಕಿ ಲಸಿಕೆ ಹಾಕುವುದಿಲ್ಲ. ಅವರು ಊರಿಗೆ ಬಂದಾಗ ಸಿಗುವ ಜಾನುವಾರುಗಳಿಗೆ ಮಾತ್ರ ಲಸಿಕೆ ಹಾಕುತ್ತಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.

ಪಶು ಸಂಜೀವಿನಿ ವಾಹನದ ಬಗ್ಗೆ ಗ್ರಾಮೀಣ ಪ್ರದೇಶದ ರೈತರಿಗೆ ಅರಿವೇ ಇಲ್ಲ. ಗ್ರಾಮೀಣ ಭಾಗದ ರೈತರು ಜಾನುವಾರುಗಳಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳನ್ನೇ ಬಾಡಿಗೆಗೆ ಪಡೆದು ತೆರಳುತ್ತಿದ್ದಾರೆ.

ಖಾಲಿ ಇದ್ದ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ. ವರ್ಷದಲ್ಲಿ ಎರಡು ಬಾರಿ ಜಾನುವಾರುಗಳಿಗೆ ಲಸಿಕೆ ಹಾಕುತ್ತೇವೆ
–ಅಮರೇಗೌಡ ಪಾಟೀಲ ತಾಲ್ಲೂಕು ಪಶು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.