ADVERTISEMENT

ಚಿರತೆ ಮರಿ ಸೆರೆಹಿಡಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 9:52 IST
Last Updated 25 ಸೆಪ್ಟೆಂಬರ್ 2022, 9:52 IST

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆ ಮರಿಯೊಂದನ್ನು ಗ್ರಾಮಸ್ಥರೆ ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಗ್ರಾಮದ ಕುರಿಗಾಯಿಗಳು ಬೆಳಿಗ್ಗೆ ಕುರಿಗಳೊಂದಿಗೆ ಗುಡ್ಡ ಏರಿ ಹೋಗುವಾಗ ಎರಡು ಚಿರತೆ ಮರಿಗಳು ಓಡಿ ಬಂದಿವೆ. ಗಾಬರಿಯಾದ ಕುರಿಗಾಯಿಗಳು ಚಿರತೆ ಮರಿಗಳನ್ನು ಬೆದರಿಸಿದ್ದಾರೆ. ಒಂದು ಚಿರತೆ ಮರಿ ಗುಡ್ಡದಲ್ಲಿ ಓಡಿ ಮರೆಯಾಗಿದೆ. ಇನ್ನೊಂದು ಮರಿಯು ಮರ ಏರಿ ಕುಳಿತಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮರ ಏರಿದ್ದ ಚಿರತೆ ಮರಿಯನ್ನು ಬಲೆಹಾಕಿ ಹಿಡಿದಿದ್ದಾರೆ.
ಕೆಲವು ದಿನಗಳ ಹಿಂದೆಯೇ ನೀರಮಾನ್ವಿ ಗುಡ್ಡದ ಸಮೀಪದ ಜಮೀನಿನಲ್ಲಿ ದೊಡ್ಡ ಚಿರತೆಯ ಹೆಜ್ಜೆಗಳ ಗುರುತುಗಳು ಪತ್ತೆಯಾಗಿದ್ದವು.

ADVERTISEMENT

ಅದಕ್ಕೂ ಮೊದಲು ಒಂದು ತಿಂಗಳು ಹಿಂದೆ ಒಂದು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದರು. ಈಗ ಇನ್ನೊಂದು ಚಿರತೆಯು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಂತಾಗಿದೆ. ತಾಯಿ ಚಿರತೆ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ, ಗ್ರಾಮದಲ್ಲಿ ಆತಂಕ ಮನೆಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.