ರಾಯಚೂರು: ತಾಲ್ಲೂಕಿನ ಡಿ.ರಾಂಪೂರ ಗ್ರಾಮದ ಪರಮೇಶ್ವರ ಬೆಟ್ಟದಲ್ಲಿರುವ ಚಿರತೆ ಹಿಡಿದು ಕಾಡಿಗೆ ಬಿಡಬೇಕು ಎಂದು ಒತ್ತಾಯಿಸಿ ಡಿ.ರಾಂಪೂರ ಗ್ರಾಮಸ್ಥರು ನಗರದ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ‘ಪರಮೇಶ್ವರ ಬೆಟ್ಟದಲ್ಲಿ ಎರಡು ತಿಂಗಳಿಂದ ಚಿರತೆ ವಾಸ ಮಾಡುತ್ತಿದೆ. ಈಗಾಗಲೇ ನೂರಾರು ನವಿಲು, 20ಕ್ಕೂ ಅಧಿಕ ನಾಯಿ, ಎರಡು ಕುರಿಗಳನ್ನೂ ತಿಂದು ಹಾಕಿದೆ. ಆದರೆ, ಅರಣ್ಯ ಅಧಿಕಾರಿಗಳು ಜೀವಹಾನಿ ತಡೆಯಲು ಹಾಗೂ ಚಿರತೆ ಹಿಡಿಯಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
‘ಬೆಟ್ಟದಲ್ಲಿ ಚಿರತೆಗೆ ಆಹಾರದ ಕೊರತೆಯಾಗಿದೆ. ಹಾಗಾಗಿ ಆಹಾರಕ್ಕಾಗಿ ಮನೆಗಳಲ್ಲಿ ಬಂದು ಕುರಿಗಳನ್ನು ತಿಂದಿದೆ. ಮುಂದೆ ಮನುಷ್ಯರ ಮೇಲೂ ದಾಳಿ ಮಾಡಿದರೆ ಅಚ್ಚರಿ ಇಲ್ಲ’ ಎಂದರು. ತಾಯಪ್ಪ ಅವರ ಕುರಿಗಳನ್ನು ಚಿರತೆ ತಿಂದಿದ್ದು, ಅರಣ್ಯ ಇಲಾಖೆ ತಕ್ಷಣ ರೈತನಿಗೆ ನಷ್ಟ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
‘ಚಿರತೆ ಹಿಡಿಯಲೆಂದೇ ಗ್ರಾಮದಲ್ಲಿ ಎರಡು ಬೋನುಗಳನ್ನು ಇಟ್ಟಿದ್ದೇವೆ. ಅದು ಬೋನಿಗೆ ಬೀಳದಿದ್ದರೆ ಏನು ಮಾಡಬೇಕು’ ಎಂದು ಗ್ರಾಮಸ್ಥರನ್ನೇ ಪ್ರಶ್ನಿಸುತ್ತಿದ್ದಾರೆ. ಒಂದು ಕಡೆ ಹೊಳೆ ದಂಡೆಯಲ್ಲಿ ಮೊಸಳೆಗಳ ಭಯ ಇದೆ. ಇನ್ನೊಂದು ಕಡೆ ಚಿರತೆಯ ಭಯ ಕಾಡುತ್ತಿದೆ. ಹೀಗಾದರೆ ಜಾನುವಾರು ಸಾಕಾಣಿಕೆ ಮಾಡುವುದು ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸದಿದ್ದರೆ ಗ್ರಾಮದ ಜಾನುವಾರುಗಳೆಲ್ಲವನ್ನೂ ರಾಯಚೂರಿಗೆ ತಂದು ಅರಣ್ಯ ಇಲಾಖೆಯ ಡಿಸಿಎಫ್ ಕಚೇರಿ ಆವರಣದಲ್ಲಿ ಕಟ್ಟಿ ಹಾಕುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಆಂಜನೇಯ, ಕರಿಯಪ್ಪ ನಾಯಕ, ಕೆ.ಗೋವಿಂದ, ಕೆ. ಉರುಕುಂದ, ನರಸಿಂಹ ರೆಡ್ಡಿ, ಪ್ರಶಾಂತ, ಮಾರೆಪ್ಪ, ಶ್ರೀನಿವಾಸ, ಸಣ್ಣ ಅಶೋಕ, ಪಿ.ಶಂಕರ, ನಿಂಗಪ್ಪ, ಪಿ. ಸುಬ್ಬು, ವೆಂಕಟೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.