ರಾಯಚೂರು: ಕುವೆಂಪು ಅವರ ಸಾಹಿತ್ಯದುದ್ದಕ್ಕೂ ವೈಚಾರಿಕ ಪ್ರಜ್ಞೆ, ವಿಶ್ವಮಾಶನವ ಪರಿಕಲ್ಪನೆ ಮಡುಗಟ್ಟಿದೆ .ಅವರು ವಿಶ್ವದ ಶ್ರೇಷ್ಠ ಲೇಖಕರಾಗಿದ್ದಾರೆ ಎಂದು ಸಾಹಿತಿ ಸಂಧ್ಯಾ ಹೊನಗುಂಟಿಕರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ 81 ಕವಿಕಾವ್ಯ ವಿಚಾರ ವೇದಿಕೆಯಿಂದ ಸೋಮವಾರ ಏರ್ಪಡಿಸಿದ್ದ ‘ಕುವೆಂಪು ಅವರ ನಾಟಕಗಳು: ವರ್ತಮಾನದ ಮುಖಾಮುಖಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊಸದನ್ನು ಹುಟ್ಟುಹಾಕುವ ಶಕ್ತಿ ಕುವೆಂಪು ಅರವರಿಗಿತ್ತು. ಕುವೆಂಪು ಅರವರಲ್ಲಿನ ಅನ್ವೇಷಕ ಗುಣವನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು.
ಸಾಹಿತಿ ವೀರಹನುಮಾನ ಮಾತನಾಡಿ, ಕುವೆಂಪು ಅವರ ನಾಟಕಗಳು ಸಮಾಜಮುಖಿ ಗುಣ ಹೊಂದಿದ್ದಲ್ಲದೆ, ಜ್ಯಾತ್ಯತೀತ ನಿಲುವುಗಳನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು.
ರಂಗಕರ್ಮಿ ಪ್ರವೀಣರೆಡ್ಡಿ ಗುಂಜಳ್ಳಿ ಮಾತನಾಡಿ, ಆಧುನಿಕ ರಂಗಭೂಮಿಯ ಪ್ರವೇಶಕ್ಕೆ ಕುವೆಂಪು ಅವರ ನಾಟಕಗಳು ಕೀಲಿಕೈಯಂತಿವೆ. ಕುವೆಂಪು ಅವರು ಮನೋರಂಗಭೂಮಿಯನ್ನು ಪ್ರಧಾನವಾಗಿಟ್ಟುಕೊಂಡು ನಾಟಕಗಳನ್ನು ಬರೆದಿದ್ದಾರೆ. ಅವರ ನಾಟಕಗಳಿಗೆ ದೂರದೃಷ್ಟಿಯ ಗುಣವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ಕುವೆಂಪು ಅವರಿಗೆ ಕನ್ನಡ ನಾಟಕ ಸಾಹಿತ್ಯದಲ್ಲಿ ಪ್ರತ್ಯೇಕವಾದ ಸ್ಥಾನವಿದೆ. ಅವರು ನಾಟಕ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಅವರ ಬಹುಪಾಲು ನಾಟಕಗಳ ವಸ್ತು ಪುರಾಣಗಳದ್ದಾಗಿದ್ದರೂ ಅವುಗಳನ್ನು ಸಮಕಾಲೀನವಾಗಿಸಿ ನೋಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಯಾವತ್ತಿಗೂ ವರ್ತಮಾನದ ಶ್ರೇಷ್ಠ ಬರಹಗಾರರಾಗಿಯೇ ಉಳಿದಿದ್ದಾರೆ ಎಂದು ಹೇಳಿದರು.
ಸಾಹಿತ್ಯ ಅಕಾಡೆಮಿಯ ಜಿಲ್ಲಾ ಪ್ರತಿನಿಧಿ ರವಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರ ಜಲಗಾರ ನಾಟಕದ ವಸ್ತು ವರ್ತಮಾನದೊಂದಿಗೆ ಸದಾ ಮುಖಾಮುಖಿಯಾಗುತ್ತದೆ ಎಂದರು.
ಸಹಾಯಕ ಪ್ರಾದ್ಯಾಪಕ ಡಾ. ಶಿವಯ್ಯ ಹಿರೇಮಠ ಸ್ವಾಗತಿಸಿದರು. ಮಹದೇವಪ್ಪ ಅವರು ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.