ADVERTISEMENT

ಏಕಾಗ್ರತೆಯಿಂದ ಓದಿದ್ದು ನೆರವಾಯಿತು: ಬಿ.ವನಿತಾ

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ

ನಾಗರಾಜ ಚಿನಗುಂಡಿ
Published 3 ಮೇ 2019, 19:45 IST
Last Updated 3 ಮೇ 2019, 19:45 IST
ಬಿ.ವನಿತಾ
ಬಿ.ವನಿತಾ   

ಪ್ರತಿಭಾನ್ವಿತೆಯ ವಿವರ

ಹೆಸರು: ಬಿ. ವನಿತಾ

ತಂದೆ: ಬಿ.ಸತ್ಯನಾರಾಯಣ

ADVERTISEMENT

ತಾಯಿ: ಬಿ. ರಾಧಾ

ಊರು: ರಾಯಚೂರು ನಿವಾಸಿ

ಕಾಲೇಜು: ಎಸ್ಆರ್‌ಪಿಎಸ್ ಪಿಯು ಕಾಲೇಜು, ರಾಯಚೂರು

ಪಡೆದ ಅಂಕ: 600/580 (ಶೇ 96.66) 7019297527

ರಾಯಚೂರು: ವಾಣಿಜ್ಯ ಓದುವವರಿಗೆ ಫಾರ್ಮುಲಾಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ಫಾರ್ಮುಲಾ ಒಂದು ಸಲ ಮನನ ಮಾಡಿಕೊಂಡಿದ್ದು ನನಗೆ ಸಾಕಾಗುತ್ತಿತ್ತು. ಬರೆದು ಪ್ರ್ಯಾಕ್ಟಿಸ್‌ ಮಾಡುತ್ತಿರಲಿಲ್ಲ. ಪಾಠಗಳನ್ನು ಕೇಳುವಾಗಲೇ ಫಾರ್ಮುಲಾಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳುವ ಅಭ್ಯಾಸ ತುಂಬಾ ನೆರವಾಯಿತು.

ಪ್ರಥಮ ಪಿಯುಸಿಯಲ್ಲಿ ವಾಣಿಜ್ಯ ಆಯ್ಕೆ ಮಾಡಿಕೊಂಡು ಆರಂಭದಿಂದಲೇ ಏಕಾಗ್ರತೆಯಿಂದ ಓದುವುದನ್ನು ರೂಢಿಸಿಕೊಂಡಿದ್ದು ಕೂಡಾ ಹೆಚ್ಚು ಅಂಕ ಪಡೆಯುವುದಕ್ಕೆ ಸಾಧ್ಯವಾಯಿತು. ವಿಷಯಾಸಕ್ತಿ ಕಳೆದುಕೊಳ್ಳಲಿಲ್ಲ. ಬಿಡದೆ ಟ್ಯುಷನ್‌ಗೆ ಹೋಗುತ್ತಿದ್ದೆ. ಟ್ಯುಷನ್‌ನಲ್ಲಿ ಹೇಳಿಕೊಟ್ಟಿದ್ದನ್ನು ಚಾಚುತಪ್ಪದೇ ಮಾಡಿಕೊಂಡು ಬರುತ್ತಿದೆ. ಇನ್ನುಳಿದಂತೆ ವಿಷಯಗಳನ್ನು ಸಾಮಾನ್ಯ ರೀತಿಯಲ್ಲಿಯೇ ಅಧ್ಯಯನ ಮಾಡಿಕೊಂಡಿದ್ದೇನೆ.

ಫೆಬ್ರುವರಿ ಪರೀಕ್ಷೆ ಸಮೀಪಿಸುತ್ತಿದ್ದಂತೆ, ದಿನಕ್ಕೆ ಕೆಲವು ಸಲ 14 ಗಂಟೆಗಳ ಕಾಲ ಓದಿಕೊಂಡಿದ್ದೇನೆ. ಕಠಿಣ ಪರಿಶ್ರಮ ಪಟ್ಟರೆ ಫಲ ಸಿಗುತ್ತದೆ. ಆದರೆ, ಈ ಪರಿಶ್ರಮವನ್ನು ಒಂದೇ ಸಮಯಕ್ಕೆ ಹಾಕುವುದಕ್ಕೆ ಯೋಜನೆ ಮಾಡಿಕೊಳ್ಳಲಿಲ್ಲ. ಬದಲಾಗಿ ಮೊದಲಿನಿಂದಲೂ ಪರಿಶ್ರಮ ಪಡುವುದನ್ನು ರೂಢಿಸಿಕೊಂಡಿದ್ದರಿಂದ ಒಳ್ಳೆಯ ಪ್ರತಿಫಲ ಪಡೆಯುವುದಕ್ಕೆ ಸಾಧ್ಯವಾಯಿತು. ಓದುವುದಕ್ಕೆ ಮನೆಯವರೆಲ್ಲ ಬೆಂಬಲವಾಗಿದ್ದರು.

ಶಕ್ತಿನಗರದಲ್ಲಿ ಮನೆ ಹಾಗೂ ರಾಯಚೂರಿನಲ್ಲಿ ಕಾಲೇಜು ಇದ್ದುದರಿಂದ ಬಹಳಷ್ಟು ಸಮಯ ಸಂಚಾರದಲ್ಲೇ ಕಳೆದಿದ್ದೇನೆ. ಓದಿಕೊಂಡು ಮನಸ್ಸು ಭಾರವಾದರೆ, ಚಿತ್ರಕಲೆ ಬಿಡಿಸುತ್ತಿದ್ದೆ. ಪರೀಕ್ಷೆ ಉದ್ದೇಶಕ್ಕಾಗಿ ಕೆಲವು ತಿಂಗಳು ಮೊಬೈಲ್‌ ಸಂಪರ್ಕವನ್ನೇ ಬಿಟ್ಟುಬಿಟ್ಟಿದ್ದೆ. ಸೋಷಿಯಲ್‌ ಮೆಡಿಯಾದಿಂದ ಹೊರಬಂದು ಪುಸ್ತಕದಲ್ಲಿ ಮುಳುಗಿದೆ. ಮೂರು ತಿಂಗಳು ಹಿಂದೆ ಟಿವಿ ಚಾನೆಲ್‌ಗಳು ಸರಿಯಾಗಿ ಬರುತ್ತಿರಲಿಲ್ಲ. ಅದು ಕೂಡಾ ಒಳ್ಳೆಯದಾಯಿತು ಅಂದುಕೊಂಡು, ಏಕಾಗ್ರತೆಯಿಂದ ಓದಿದೆ.

ಮನಸ್ಸಿನ ಒತ್ತಡ ಕಳೆಯಲು ಹಾಡುಗಳನ್ನು ಕೇಳುವುದಕ್ಕೆ ಮಾತ್ರ ಮೊಬೈಲ್‌ ಬಳಸುತ್ತಿದ್ದೆ. ಇದಲ್ಲದೆ ಸಾಹಿತ್ಯ ಅಭಿರುಚಿ ಇದೆ. ಇಷ್ಟವಾಗುವ ಕಾದಂಬರಿಗಳನ್ನು ಆಗಾಗ ಓದಿಕೊಳ್ಳುತ್ತೇನೆ. ಓದುವುದನ್ನು ನಿತ್ಯ ರೂಢಿಮಾಡಿಕೊಂಡಿದ್ದರಿಂದ ಒಳ್ಳೆಯ ಪರಿಣಾಮವೆ ಆಗುತ್ತಿದೆ. ಇದನ್ನೇ ಮುಂದುವರಿಸಿಕೊಂಡು ಹೋಗುವ ಯೋಜನೆ ನನ್ನದು.

ಬಿ.ಕಾಂ. ಪೂರ್ಣಗೊಳಿಸಿ ಚಾರ್ಟ್‌ರ್ಡ್‌ ಅಕೌಂಟಂಟ್‌ (ಸಿಎ) ಪರೀಕ್ಷೆ ಪಾಸು ಮಾಡುವ ಗುರಿ ಇದೆ. ಇದಕ್ಕಾಗಿ ಸತತ ಪ್ರಯತ್ನ ಮುಂದುವರಿಸುತ್ತೇನೆ.

* ವಿಧೇಯ ವಿದ್ಯಾರ್ಥಿನಿ. ಕಠಿಣ ಪರಿಶ್ರಮ ಪಡುವ ಸ್ವಭಾವ ಇದೆ. ವಾಣಿಜ್ಯದಲ್ಲಿ ಉತ್ತಮ ಅಂಕಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ.

–ವೀರೇಶ ಸೆರೆಗಾರ,ಪ್ರಾಂಶುಪಾಲರು,ಎಸ್ಆರ್‌ಪಿಎಸ್ ಪಿಯು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.