ADVERTISEMENT

6 ರಂದು ಅಡಿಗರ ಸಾಹಿತ್ಯ; ವರ್ತಮಾನದ ಮುಖಾಮುಖಿ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 12:40 IST
Last Updated 3 ಜನವರಿ 2020, 12:40 IST
   

ರಾಯಚೂರು: ಕರ್ನಾಟಕ ಸಾಹಿತ್ಯ ಆಕಾಡೆಮಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜನವರಿ 6ರಂದು ಬೆಳಿಗ್ಗೆ 10.30ಕ್ಕೆ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವದ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಡಿಗರ ಸಾಹಿತ್ಯ: ವರ್ತಮಾನದ ಮುಖಾಮುಖಿ’ ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯ ಸಂಚಾಲಕ ಡಾ.ಎಂ.ಬಿ.ಶರಭೇಂದ್ರಸ್ವಾಮಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತಕುಮಾರ ವಿಚಾರ ಸಂಕಿರಣ ಉದ್ಘಾಟಿಸುವರು. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಸ್ತಗಿರಿಸಾಬ್ ದಿನ್ನಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಮೊದಲ ಗೋಷ್ಠಿಯಲ್ಲಿ ‘ಅಡಿಗರ ಕಾವ್ಯದಲ್ಲಿ ಸಮಾಜೋರಾಜಕೀಯ ಚಿಂತನೆಗಳು’ ವಿಷಯ ಕುರಿತು ಮಹಾಂತೇಶ ಮಸ್ಕಿ, ‘ಅಡಿಗರ ಸಂಪಾದನೆಯ ‘ಸಾಕ್ಷಿ ಪತ್ರಿಕೆ ಮತ್ತು ಬಹುಮುಖಿ ನೆಲೆಗಳು’ ವಿಷಯ ಕುರಿತು ಡಾ.ಶೋಭಾ ಚಪ್ಪರದಳ್ಳಿಮಠ ಮಾತನಾಡುವರು. ಪ್ರತಿಕ್ರಿಯೆಯನ್ನು ಡಾ.ಶಿವಯ್ಯ ಹಿರೇಮಠ, ವೀರಹನುಮಾನ, ಖಾದರ್ ಬಾಷಾ ಕೆ. ನೀಡಲಿದ್ದಾರೆ ಎಂದು ಹೇಳಿದರು.

ADVERTISEMENT

ಎರಡನೇ ಗೋಷ್ಠಿಯಲ್ಲಿ ‘ಅಡಿಗರ ಲೇಖನ ಮತ್ತು ವಿಮರ್ಶೆ’ ಕುರಿತು ಸೂರ್ಯಪ್ರಕಾಶ ಪಂಡಿತ, ‘ಅಡಿಗರ ಕಥೆ ಕಾದಂಬರಿಗಳಲ್ಲಿ ಮನುಷ್ಯ ಕೇಂದ್ರಿತ ಒಲವುಗಳು’ ವಿಷಯ ಕುರಿತು ಡಾ.ಶೀಲಾದಾಸ ಮಾತನಾಡಲಿದ್ದಾರೆ. ಪ್ರತಿಕ್ರಿಯೆಯನ್ನು ಡಾ.ರಾಜಶ್ರೀ ಕಲ್ಲೂರಕರ್, ವೆಂಕಟೇಶ ಬೇವಿನ ಬೆಂಚಿ,ಡಾ.ಶರೀಫ್ ಹಸಮಕಲ್ ವಹಿಸುವರು ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಅವರಿಂದ ಸಮಾರೋಪ ಭಾಷಣ. ಆಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಸಂತಕುಮಾರ ಅಧ್ಯಕ್ಷತೆ ವಹಿಸುವರು. ಆಕಾಡೆಮಿಯ ರಿಜಿಸ್ಟರ್ ಕರಿಯಪ್ಪ ಎನ್. ಭಾಗವಹಿಸುವರು ಎಂದು ಹೇಳಿದರು.

ವೆಂಕಟೇಶ ಬೇವಿನಬೆಂಚಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.