ADVERTISEMENT

‘ಕೃಷಿ ತಂತ್ರಜ್ಞಾನಗಳಿಗೆ ಜಾಗತಿಕ ಬೇಡಿಕೆ’-ಬಿ.ಸಿ.ಪಾಟೀಲ

ಆನ್‌ಲೈನ್‌ ಮೂಲಕ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:01 IST
Last Updated 30 ಆಗಸ್ಟ್ 2021, 16:01 IST
ರಾಯಚೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನಗಳ ವಾಣಿಜ್ಯೀಕರಣದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿದರು
ರಾಯಚೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ತಂತ್ರಜ್ಞಾನಗಳ ವಾಣಿಜ್ಯೀಕರಣದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿದರು   

ರಾಯಚೂರು: ಕೃಷಿ ಎಂಜಿನಿಯರಿಂಗ್ ಮತ್ತು ಕೋಯ್ಲೋತ್ತರ ತಂತ್ರಜ್ಞಾನಗಳಿಗೆ ಅಪಾರವಾದ ಬೇಡಿಕೆ ಇದೆ. ತಂತ್ರಜ್ಞಾನಗಳನ್ನು ವಾಣಿಜ್ಯೀಕರಿಸಿ ತಮ್ಮ ಹಕ್ಕನ್ನು ಉದ್ಯಮಗಳಿಗೆ ನೀಡಿದಾಗ ಜಾಗತೀಕ ಮಟ್ಟದಲ್ಲಿ ತೆರೆದುಕೊಂಡು ಹೋಗಬಲ್ಲ ಶಕ್ತಿ ಉದ್ಯಮಿಗಳಲ್ಲಿ ಇದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೃಷಿ ತಂತ್ರಜ್ಞಾನಗಳ ವಾಣಿಜ್ಯೀಕರಣದ ಸಂವಾದ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೃಷಿ ತಂತ್ರಜ್ಞಾನಗಳು ರೈತರಿಗೆ ಮತ್ತು ಬಳಕೆದಾರರಿಗೆ ಸರಿಯಾದ ರೀತಿಯಲ್ಲಿ ತಲುಪಿದಾಗ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತವೆ. ಇಲ್ಲದಿದ್ದರೆ ಆ ತಂತ್ರಜ್ಞಾನ ಕೇವಲ ಶೈಕ್ಷಣಿಕ ಆಸಕ್ತಿಗಾಗಿ ಮಾತ್ರ ಉಳಿಯುತ್ತದೆ. ವಿಶ್ವವಿದ್ಯಾಲಯಗಳಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಮತ್ತು ಗ್ರಾಹಕರನ್ನು ತಲುಪುವುದು ಅಸಾಧ್ಯ. ತಂತ್ರಜ್ಞಾನವು ಬಳಕೆದಾರ ಸ್ನೇಹಿಯಾಗಿದ್ದು ಸರಿಯಾದ ಮಾರ್ಗದಲ್ಲಿ ಉದ್ಯಮಿಗಳು ಮುಂದುವರೆಸಿಕೊಂಡು ಹೋಗಿದ್ದಲ್ಲಿ ರಾಜ್ಯ ವಿಶ್ವವಿದ್ಯಾಲಯ ಮತ್ತು ಸಂಶೋಧಕರ ಹೆಸರು ಸಹ ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ ಎಂದು ಹೇಳಿದರು.

ADVERTISEMENT

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸುಮಾರು 12 ವರ್ಷಗಳಲ್ಲಿ ಬಿಡುಗಡೆಗೊಳಿಸಿದ ತಂತ್ರಜ್ಞಾನಗಳು ಅನೇಕ, ಅವುಗಳಲ್ಲಿ ವಿಶೇಷವಾಗಿ ತಳಿ ಅಭಿವೃದ್ದಿಯಲ್ಲಿನ ಅನೇಕ ತಂತ್ರಜ್ಞಾನಗಳನ್ನು ಕಲ್ಯಾಣ ಕರ್ನಾಟಕದ ಭಾಗದ ರೈತರುಅಳವಡಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಎಫ್‍ಕೆಸಿಸಿಐ ಈಗಾಗಲೇ ತಮ್ಮ ಕಾರ್ಯಚಟುವಟಿಕೆಗಳ ಮೂಲಕ ರಾಜ್ಯದಲ್ಲಿ ಮನೆಮಾತಾಗಿದೆ. ಸದುದ್ದೇಶದಿಂದ ಅಸ್ತಿತ್ವಕ್ಕೆ ಬಂದ ಎಫ್‍ಕೆಸಿಸಿ ವಿಶೇಷವಾಗಿ ರಾಜ್ಯದ ಉದ್ಯಮಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ. ಕೇವಲ ಆರಂಭವಷ್ಟೇ, ಬರುವ ದಿನಗಳಲ್ಲಿ ಎಫ್‍ಕೆಸಿಸಿ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳನ್ನು ಸಹ ಸಂಪರ್ಕಸಿ ವಾಣಿಜ್ಯೀಕರಣದ ಕ್ರಾಂತಿಗೆ ದೀಪ ಬೆಳಗಿಸಬೇಕಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಮಾತನಾಡಿ, ರೈತರಿಗೆ ಸಮರ್ಪಕ ನೀರಾವರಿ ಅಳವಡಿಸಿಕೊಳ್ಳುವ ಬಗ್ಗೆ ವಿಜ್ಞಾನಿಗಳು ಸಲಹೆ ನೀಡಬೇಕು ಎಂದು ತಿಳಿಸಿದರು.

ಬೆಂಗಳೂರಿನ ಎಫ್‍ಕೆಸಿಸಿ ಅಧ್ಯಕ್ಷ ಪೆರಿಕಲ್ ಎಂ.ಸುಂದರ ಮಾತನಾಡಿ, ಎಫ್‍ಕೆಸಿಸಿಐ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಮಾತ್ರ ಸೀಮಿತವಗಿರುವುದಲ್ಲದೇ ಕೃಷಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವುದಕ್ಕೆ ಈ ಸಂವಾದ ಸಭೆಯೇ ಉದಾಹರಣೆಯಾಗಿದೆ ಎಂದರು.

ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯ ಕೊಟ್ರೆಪ್ಪ ಕೊರೇರ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್ ಕಟ್ಟಿಮನಿ ಮಾತನಾಡಿ, ಸಂಶೋಧನಾ ಮತ್ತು ಶೈಕ್ಟಣಿಕ ಸಂಸ್ಥೆಗಳಲ್ಲಿ ಬಿಡುಗಡೆಗೊಳಿಸಿರುವ ಅನೇಕ ತಂತ್ರಜ್ಞಾನಗಳು ಒಪ್ಪಂದದ ಮೂಲಕ ಮೂರನೇ ವ್ಯಕ್ತಿಗೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ನೀಡಬಹುದಾದ ಪರವಾನಿಗೆ. ಈ ಮೂಲಕ ಸಂಸ್ಥೆಯ ಭೌದ್ದಿಕ ಹಕ್ಕನ್ನು ಸಾರ್ವಜನೀಕರಿಸಿದಂತಾಗುತ್ತದೆ ಎಂದು ಹೇಳಿದರು.

ಸಂಶೋಧನಾ ನಿರ್ದೇಶಕ ಡಾ.ಬಿ.ಕೆ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಜಿ.ಶ್ರೀಧರ ಕೆಸರಹಟ್ಟಿ, ಮಹಾಂತೇಶಗೌಡ ಬಿ.ಪಾಟೀಲ, ಸುನೀಲ ಕುಮಾರ ವರ್ಮಾ, ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ಜಂಬಣ್ಣ ಇದ್ದರು.
ವೈಷ್ಣವಿ ಪ್ರಾರ್ಥಿಸಿದರು. ಕುಲಸಚಿವ ಡಾ.ಎಂ.ಜಿ ಪಾಟೀಲ ಸ್ವಾಗತಿಸಿದರು. ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.