ಶಕ್ತಿನಗರ: ಎಳ್ಳ ಅಮಾವಾಸ್ಯೆ ನಿಮಿತ್ತ ಶನಿವಾರ ದೇವಸೂಗೂರು ಮತ್ತು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ರೈತರ ಜಮೀನುಗಳಲ್ಲಿ ಪೂಜೆ ಸಲ್ಲಿಸಿ ಸಂಭ್ರಮದಿಂದ ಆಚರಿಸಿದರು.
ಜೋಳ, ಕಡಲೆ, ತೊಗರಿ ಸೇರಿದಂತೆ ವಿವಿಧ ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮಧ್ಯೆ ಎಳ್ಳ ಅಮವಾಸ್ಯೆ ಹಬ್ಬ ಬಂದಿರುವುದು ಖುಷಿ ತಂದಿದೆ. ಅರಷಣಿಗಿ ರೈತ ನಾಗಪ್ಪ ಹೊಸಮನಿ ಅವರು, ತಮ್ಮ ಹೊಲದಲ್ಲಿ ಭೂ ಮಾತೆಗೆ ಚರಗ ಚಲ್ಲಿ ಹಬ್ಬಕ್ಕೆ ಚಾಲನೆ ನೀಡಿದರು.
ಎಳ್ಳು ಅಮಾವಾಸ್ಯೆ ರೈತರಲ್ಲಿ ಸಂಭ್ರಮ ಮಾಡಿದೆ. ಸಂಬಂಧಿಕರು, ಸ್ನೇಹಿತರಿಗೆ, ಒಡನಾಡಿಗಳಿಗೆ ಹೊಲಕ್ಕೆ ಊಟಕ್ಕೆ ಬರಲು ಆಹ್ವಾನ ನೀಡಿದ್ದರು. ಹೊಲದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಪೂಜೆ ಸಲ್ಲಿಸಿ ಎಳ್ಳು ಅಮಾವಾಸ್ಯೆ ಆಚರಿಸಿದರು.
ಭೂಮಿ ಪೂಜೆ
ಸಿರವಾರ: ರೈತರು ಜಮೀನುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಎಳ್ಳ ಅಮಾವಾಸ್ಯೆಯನ್ನು ಭಾನುವಾರ ಆಚರಿಸಲಾಯಿತು.
ಬೆಳ್ಳಂಬೆಳಿಗ್ಗೆ ತಮ್ಮ ಮನೆಗಳಲ್ಲಿ ಹೋಳಿಗೆ, ಅನ್ನ, ಸಾರು ಸೇರಿದಂತೆ ವಿಶೇಷ ಅಡುಗೆ ತಯಾರಿಸಿಕೊಂಡು ಕುಟುಂಬದ ಸಮೇತರಾಗಿ ಜಮೀನುಗಳಿಗೆ ತೆರಳಿ ಐದು ಕಲ್ಲುಗಳನ್ನು ಇಟ್ಟು ಪಂಚ ಪಾಂಡವರನ್ನು ಸ್ಮರಿಸಿ ಪೂಜಿಸಿ, ನೈವೇದ್ಯ ಸಮರ್ಪಿಸಿ, ಹೊಲದಲ್ಲೆಲ್ಲಾ ನೈವೇದ್ಯವನ್ನು ಚರಗ ಚೆಲ್ಲುವ ಮೂಲಕ ಪೂಜೆ ಸಲ್ಲಿಸಲಾಯಿತು.
ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿ, ಮುಂದಿನ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ಭೂತಾಯಿ ಸಪನ್ನವಾಗಿರಲಿ ಎಂದು ಪ್ರಾರ್ಥಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.