ADVERTISEMENT

ಯೋಗ ಚಿಕಿತ್ಸಾ ವೈದ್ಯ ಹಿರೇಮಠ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಜೂನ್ 2022, 4:54 IST
Last Updated 21 ಜೂನ್ 2022, 4:54 IST
ಬಸವಲಿಂಗಯ್ಯಸ್ವಾಮಿ ಹಿರೇಮಠ
ಬಸವಲಿಂಗಯ್ಯಸ್ವಾಮಿ ಹಿರೇಮಠ   

ಲಿಂಗಸುಗೂರು: ‘ಪ್ರೌಢಶಾಲಾ ಹಂತದಲ್ಲಿ ಹರಿದ್ವಾರದ ಯೋಗ ಗುರು ರಾಮದೇವ ಗುರೂಜಿ ಪ್ರೇರಣೆಯಿಂದ ಶಾರೀರಿಕ, ಬೌದ್ಧಿಕ ವೃದ್ಧಿಗಾಗಿ ಯೋಗ ಆರಂಭಿಸಿದ ಬಸವಲಿಂಗಯ್ಯ ಮಹಾಂತೇಶ ಹಿರೇಮಠ ಯೋಗ ಚಿಕಿತ್ಸೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಕಾಂ ಪದವಿಧರರಾದ ಬಸವರಾಜಯ್ಯಸ್ವಾಮಿ ಹಿರೇಮಠ ಬಾಲ್ಯದಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ರಾಮದೇವ ಗುರೂಜಿ ಅವರ ಯೋಗ ನೋಡುತ್ತ, ಪ್ರೌಢಶಾಲಾ ಹಂತದಲ್ಲಿ ಪರಿಪೂರ್ಣ ಯೋಗ ಕಲಿಕೆಯ ಹಂತ ತಲುಪಿದರು. 2016ರಲ್ಲಿ ಯೋಗ ಗುರು ರಾಮದೇವ ಗುರೂಜಿ ಭೇಟಿಗೆ ಹರಿದ್ವಾರಕ್ಕೆ ತೆರಳಿ ಕಲಿತ ವಿದ್ಯೆ ಪ್ರದರ್ಶನ ಮಾಡಿ ಆಶೀರ್ವಾದ ಪಡೆದು ಮರಳಿ ಶಾಲಾ ಕಾಲೇಜು, ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಶಿಬಿರ ನಡೆಸುತ್ತ ಬಂದರು.

ಧಾರವಾದ ಜಿಲ್ಲೆ ಗರಗದ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಒಂದು ವರ್ಷ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕೌಟುಂಬಿಕ ಸಮಸ್ಯೆ ಕಾರಣ ಮರಳಿ ಪಟ್ಟಣಕ್ಕೆ ಆಗಮಿಸಿ ಯೋಗವನ್ನೆ ಉದ್ಯೋಗವಾಗಿ ಪರಿವರ್ತಿಸಿಕೊಂಡು ಕಡಿಮೆ ಹಣದಲ್ಲಿ ಅಗತ್ಯ ಯೋಗ ಕಲಿಸಿ ಕುಟುಂಬ ನಿರ್ವಹಣೆಗೆ ಮುಂದಾಗಿದ್ದಾರೆ. ಸ್ವಂತ ಯೋಗ ಕೇಂದ್ರ ಸ್ಥಾಪಿಸುವ ಜೊತೆಗೆ ಪುತ್ತೂರಿನ ಕರುಣಾಕರ ಗುರೂಜಿ ಬಳಿ ಯೋಗ ಚಿಕಿತ್ಸೆ ತರಬೇತಿ ಪಡೆದು ಯೋಗ ಚಿಕಿತ್ಸ ಕೇಂದ್ರ ಆರಂಭಿಸಿದ್ದಾರೆ.

ADVERTISEMENT

ಉಚಿತ ಯೋಗ ಶಿಬಿರಗಳನ್ನು ಆಯೋಜಿಸುತ್ತ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಮುಂಚೆ ಕೆಲ ದಿನ ಶಿಬಿರ ನಡೆಸುತ್ತ ಬಂದಿದ್ದಾರೆ. ಯೋಗ ಚಿಕಿತ್ಸ ಕೇಂದ್ರ ಆರಂಭಿಸಿ ನೂರಾರು ರೋಗಿಗಳ ಬಾಳಿಗೆ ಬೆಳಕು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಸ್ತಮಾ, ಬೊಜ್ಜು ನಿಯಂತ್ರಣ, ಮಧುಮೇಹ, ಅನಿದ್ರಾ (ಮಾನಸಿಕ ಒತ್ತಡ), ಮೊಣಕಾಲು ನೋವು ಸೇರಿದಂತೆ ಹಲವು ರೋಗಳಿಗೆ ಯೋಗ ಮತ್ತು ಆಹಾರ ಪದ್ಧತಿ ಮೂಲಕ ಚಿಕಿತ್ಸೆ ನೀಡಿ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.

‘ರಾಮದೇವ ಗುರೂಜಿ ಪ್ರೇರಣೆಯಿಂದ ಸ್ವಯಂ ಯೋಗ ಕಲಿತು ನೂರಾರು ಶಿಬಿರ ಆಯೋಜಿಸಿ, ಸಾವಿರಾರು ಜನರಿಗೆ ಉಚಿತ ಯೋಗ ಕಲಿಸಿರುವೆ. ಬದುಕು ನಡೆಸುವುದು ಕಷ್ಟವಾದಾಗ ಯೋಗ ಚಿಕಿತ್ಸೆ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ತರಬೇತಿ ನೀಡಿ ಕಾಯಿಲೆ ದೂರ ಮಾಡಲಾಗಿದೆ. ಕಾಯಿಲೆಗಳ ನಿರ್ವಹಣೆಗೆ ಉತ್ತಮ ಫಲಿತಾಂಶ ಬಂದಿದೆ. ಯೋಗ ಮತ್ತು ಯೋಗ ಚಿಕಿತ್ಸೆಯೆ ಬದುಕು ನಿರ್ವಹಣೆಗೆ ದಾರಿಯಾಗಿದೆ’ ಎಂದು ಯೋಗ ಗುರು ಬಸವಲಿಂಗಯ್ಯ ಹಿರೇಮಠ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.