ಸಿಂಧನೂರು: ಬಸ್ ಕಂಡಕ್ಟರ್ಗೆ ಯುವತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ರಂಪಾಟ ಮಾಡಿದ ಕಾರಣ ಯುವತಿಯನ್ನು ಪ್ರಯಾಣಿಕರೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಘಟನೆ ನಡೆದಿದೆ.
ಲಿಂಗಸುಗೂರುನಿಂದ ಸಿಂಧನೂರಿಗೆ ಬರುತ್ತಿದ್ದ ಬಸ್ನಲ್ಲಿ ಬಂದ ಲಕ್ಷ್ಮಿ ಎಂಬ ಯುವತಿ ಪಗಡದಿನ್ನಿ ಕ್ಯಾಂಪ್ಗೆ ಬಸ್ ನಿಲ್ಲಿಸುವಂತೆ ತಗಾದೆ ತೆಗೆದಿದ್ದಾರೆ. ವೇಗಧೂತ ಬಸ್ ಆಗಿರುವದರಿಂದ ನಿಲ್ಲಿಸಲು ಕಂಡಕ್ಟರ್ ನಿರಾಕರಿಸಿದ್ದಾರೆ. ಇದರಿಂದ ಯುವತಿ ಮತ್ತು ಕಂಡಕ್ಟರ್ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ.
ಕಂಡಕ್ಟರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಯುವತಿಗೆ ಬಸ್ನಲ್ಲಿದ್ದ ಪ್ರಯಾಣಿಕರು ಬುದ್ಧಿಮಾತು ಹೇಳಿದ್ದಾರೆ. ಇದಕ್ಕೂ ಸುಮ್ಮನಿರದೇ ಪ್ರಯಾಣಿಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾಳೆ. ಇದೇ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ನಿರುಪಾದೆಪ್ಪ ಜೋಳದರಾಶಿ ಅವರು ಕಂಡಕ್ಟರ್ಗೆ ಯುವತಿ ಬೈಯ್ಯುವ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಲು ಮುಂದಾಗಿದ್ದಾರೆ. ಅದನ್ನ ಗಮನಿಸಿದ ಯುವತಿ ಅವರನ್ನು ಸಹ ಹಿಗ್ಗಾಮುಗ್ಗಾ ಬೈದಾಡಿದ್ದಾರೆ.
ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಯುವತಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ನಂತರ ಪೊಲೀಸರು ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮನೆಗೆ ಕಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.