ADVERTISEMENT

ಅಡ್ವಾಣಿ ಯಾತ್ರೆಗೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಆನೇಕಲ್: ಬೆಂಗಳೂರಿನಲ್ಲಿ ಭಾನುವಾರ (ಅ.30) ನಡೆಯಲಿರುವ ಅಡ್ವಾಣಿಯವರ ಜನಚೇತನ ಯಾತ್ರೆಯ ಬಹಿರಂಗ ಸಭೆಯಲ್ಲಿ ಆನೇಕಲ್ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದ 100 ಮಂದಿ ಸಕ್ರಿಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಬೂತ್ ಮಟ್ಟದ ಸಕ್ರಿಯ ಕಾರ್ಯಕರ್ತರು ಸೇರಿದಂತೆ ತಾಲ್ಲೂಕಿನಿಂದ 5 ಸಾವಿರಕ್ಕೂ ಹೆಚ್ಚುಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದಕ್ಕಾಗಿ ಸಂಪೂರ್ಣ ಸಿದ್ದತೆಯನ್ನು ಪಕ್ಷದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಮಾಡಿಕೊಳ್ಳಲಾಗಿದೆ. ಜನಚೇತನ ಯಾತ್ರೆಯ ಮಹತ್ವವನ್ನು ತಿಳಿಸುವ ಸಲುವಾಗಿ ಬೆಂಗಳೂರಿನ ಹೊರವಲಯದಲ್ಲಿ ಅ.29ರಂದು ಕಾರ್ನರ್ ಸಭೆಗಳನ್ನು ನಡೆಸಲಾಗುವುದು.

ಆನೇಕಲ್, ಅತ್ತಿಬೆಲೆ, ಚಂದಾಪುರಗಳಲ್ಲಿ ಪೂರ್ವ ಸಿದ್ದತಾ ಸಭೆ ಹಾಗೂ ಜಾಗೃತಿ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ  ಎನ್.ಬಸವರಾಜು ಈ ಸಂದರ್ಭದಲ್ಲಿ ಹಾಜರಿದ್ದರು.

10 ಸಾವಿರ ಕಾರ್ಯಕರ್ತರು
ದೇವನಹಳ್ಳಿ: `ಬೆಂಗಳೂರಿನ ನ್ಯಾಷನಲ್ ಕಾಲೇಜು ಆವರಣದಲ್ಲಿ ಅಕ್ಟೋಬರ್ 30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರ ನೇತೃತ್ವದಲ್ಲಿ ನಡೆಯಲಿರುವ ಜನ ಚೇತನ ಯಾತ್ರಗೆ ಪಕ್ಷದ 10ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ~ ಎಂದು ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ದೇವನಹಳ್ಳಿ ವಿಧಾನ ಸಭಾ ವ್ಯಾಪ್ತಿಯಲ್ಲಿರುವ 206 ಬೂತ್‌ಗಳಲ್ಲಿ ಪ್ರತಿ ಬೂತ್‌ನಿಂದ 10 ಕಾರ್ಯಕರ್ತರು ಬರುವಂತೆ ಸೂಚಿಸಲಾಗಿದೆ.

 ಅಡ್ವಾಣಿ ಅವರು ಹಮ್ಮಿಕೊಂಡಿರುವ ರಥಯಾತ್ರೆಯಲ್ಲಿ ಕಾಂಗ್ರೆಸ್ ಆಡಳಿತ ವೈಕರಿ ಹಾಗೂ ಪ್ರಮುಖ ಹಗರಣಗಳ ಕುರಿತು ಪ್ರಸ್ತಾಪಿಸಲಿದ್ದಾರೆ~ ಎಂದರು.

ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ ಮಾತನಾಡಿ, `ಸಹೋದರಿ ನಿವೇದಿತಾ ಅವರ ಜಯಂತಿಯನ್ನು ಇದೇ ಅಕ್ಟೋಬರ್ 30 ರಂದು ಅದ್ಧೂರಿಯಾಗಿ ಆಚರಿಸಲು ತಾಲ್ಲೂಕು ಮಹಿಳಾ ಮೋರ್ಚ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ.

 ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬ ಆಚರಣೆಗೆ ಬೆಂಗಳೂರಿಗೆ ತೆರಳುತ್ತಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ 150 ಕೋಟಿ ರೂ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದು~ ಎಂದರು.

ಬಿ.ಜೆ.ಪಿ ಜಿಲ್ಲಾ ಸಂಚಾಲಕ ನೆಲಮಂಗಲ ಲೋಕೇಶ್, ಉಪ ಸಂಚಾಲಕ ರಮೇಶ್, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಎಸ್.ಟಿ.ಮೋರ್ಚ ಅಧ್ಯಕ್ಷ ಮಾಚಪ್ಪ, ಪ್ರಭು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.