ADVERTISEMENT

ಒಳ್ಳೆಯ ಮನಸ್ಸಿನಿಂದ ಬದುಕು ಶುದ್ಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ರಾಮನಗರ: ಸ್ವಚ್ಛ ಮತ್ತು ಶುದ್ದ ಮನಸ್ಸಿನಿಂದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರುತ್ತದೆ ಎಂದು ಥೈಲ್ಯಾಂಡ್‌ನ ಬಂತೇಜಿ ಹ್ಯೂಮನ್ ಅವರು ಅಭಿಪ್ರಾಯಪಟ್ಟರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ಸ್ಮರಣಾರ್ಥ ದಲಿತ ಸಂಘಟನೆಗಳು ಮತ್ತು ಭೌದ್ಧ ಧರ್ಮೀಯರು ಜಂಟಿಯಾಗಿ ಶುಕ್ರವಾರ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಧಮ್ಮ ಪಬತ್ತನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸಿನಲ್ಲಿ ಯಾರ ಬಗ್ಗೆಯೂ ಯಾವುದೇ ರೀತಿಯ ವೈರತ್ವದ ಭಾವನೆ ಇರಬಾರದು. ಸದಾ ಒಳ್ಳೆಯದನ್ನು ಮಾಡಬೇಕು. ಪ್ರಾಣಿ ಹತ್ಯ ಮಾಡಬಾರದು. ಕಳ್ಳತನ, ವ್ಯಭಿಚಾರದಿಂದ ದೂರ ಇರಬೇಕು. ಸುಳ್ಳು ಹೇಳಬಾರದು ಮತ್ತು ಮದ್ಯ ವ್ಯಸನ ಮಾಡಬಾರದು ಎಂದು ಅವರು ಕಿವಿ ಮಾತು ಹೇಳಿದರು.

ಒಬ್ಬರು ಮತ್ತೊಬ್ಬರ ಮೈ ಬಣ್ಣವನ್ನು ನೋಡಿ ದ್ವೇಷಿಸುವುದು ಸರಿಯಲ್ಲ. ಇಬ್ಬರ ಬಣ್ಣಗಳು ಬೇರೆ ಇರಬಹುದು. ಆದರೆ ಅವರಿಬ್ಬರ ದೇಹದಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು. ಆದ್ದರಿಂದ ಮೇಲು, ಕೀಳು ಭಾವನೆಯನ್ನು ತೊಡೆದು ಸಮಾನವಾಗಿ ಬಾಳುವಂತೆ ಅವರು ಸಲಹೆ ನೀಡಿದರು.

ನಗರಸಭೆ ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿ, ಶೋಷಣೆಯಿಂದ ಬೇಸತ್ತ ದಲಿತರು ಬೌದ್ಧ ಧರ್ಮ ಸ್ವೀಕರಿಸಿ ಸುಮ್ಮನಾಗಬಾರದು. ದಲಿತರು ಮತ್ತು ಶೋಷಿತರ ಪರವಾಗಿ ಧ್ವನಿಯೆತ್ತಬೇಕು. ದಲಿತ ಸಂಘಟನೆಗಳ ಜತೆ ಗುರುತಿಸಿಕೊಂಡು ಬೀದಿಗಿಳಿದು ಹೋರಾಡಬೇಕು ಎಂದು ಹೇಳಿದರು.

ದಲಿತ ಮುಖಂಡರಾದ ಮೋಹನ್ ಕುಮಾರ್, ರಾ.ಸಿ.ದೇವರಾಜ್, ವೆಂಕಟಸ್ವಾಮಿ, ಸೋಮಶೇಖರ್, ಶಿವಶಂಕರ್, ದೆಹಲಿಯ ಎಫ್‌ಜಿಎಸ್‌ನ ಸುಹಾಂಗ್ ಉಪಸ್ಥಿತರಿದ್ದರು. ವಿ.ಲಿಂಗರಾಜು ಮತ್ತು ಹಣಸಾಗಿ ಸೋಮಶೇಖರ್ ಬುದ್ಧಗೀತೆ ಪ್ರಸ್ತುತ ಪಡಿಸಿದರು.
 

ತಪಾಸಣಾ ಶಿಬಿರ
ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲುಕುಂಟೆ ಗ್ರಾಮದ ಸೂರ್ಯೋದಯ ಪಬ್ಲಿಕ್ ಶಾಲೆಯಲ್ಲಿ ಬೆಂಗಳೂರಿನ ಮಹಿಳಾ ದಕ್ಷತಾ ಸಮಿತಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ಮತ್ತು ಹುಲುಕುಂಟೆ ರೂಪಕಲಾ ಯುವತಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ 9.30ಕ್ಕೆ ವಿಶೇಷ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಇನೋವಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಾರ್ಯದರ್ಶಿ ಹೆಚ್.ಪಿ.ಮಹೇಶ್ 9591523551,9972571066.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT