ದೇವನಹಳ್ಳಿ: ಹುತಾತ್ಮ ಯೋಧರ ಪತ್ನಿಗೆ ಮಂಜೂರಾಗಿರುವ ಜಮೀನಿನ ವಿವಾದ ಸೋಮವಾರ ತಾಲ್ಲೂಕಿನ ಕಾರಹಳ್ಳಿ ಗ್ರಾಮಸಭೆಯಲ್ಲೂ ಪ್ರತಿಧ್ವನಿಸಿ ಕುರ್ಚಿಗಳ ತೂರಾಟಕ್ಕೆ ಕಾರಣವಾ-ಯಿತು. ಗದ್ದಲ, ಗೊಂದಲದಿಂದ ಗ್ರಾಮಸಭೆಯನ್ನೇ ರದ್ದುಪಡಿಸಬೇಕಾಯಿತು.
ಕಾರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದ ಆಕ್ರೋಶಗೊಂಡ ಗ್ರಾಮಸ್ಥರು ಜಮೀನು ಮಂಜೂರಾತಿ ರದ್ದುಗೊಳಿಸುವವರೆಗೂ ಗ್ರಾಮಸಭೆ ಬೇಡವೆಂದು ಪಟ್ಟು ಹಿಡಿದರು.
ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ ಶಾಸಕ ಪಿಳ್ಳಮುನಿಶ್ಯಾಮಪ್ಪ ಗ್ರಾಮಸಭೆ ವರ್ಷಕ್ಕೆರಡು ಬಾರಿ ನಡೆಸುವುದು ಪಂಚಾಯತ್ರಾಜ್ ಕಾಯ್ದೆ ಅನುಗುಣವಾಗಿದೆ. ರದ್ದು ಪಡಿಸಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡುವ ಅವಕಾಶವಿದೆ.
ಜಮೀನು ವಿಚಾರವನ್ನು ಗ್ರಾಮಸಭೆಯಲ್ಲಿ ತರುವುದು ಬೇಡ ಎಂದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಗ್ರಾಮಸ್ಥರು ಶಾಸಕರಿಗೆ ಮತ್ತು ದಂಡಾ-ಧಿಕಾರಿಗಳ ವಿರುದ್ಧ ಧಿಕ್ಕಾರ ಹಾಕಿದರು.
ವೇದಿಕೆಯತ್ತ ಧಿಕ್ಕಾರದ ಫಲಕಗಳನ್ನು ಹಿಡಿದು ಬಂದ ನೂರಕ್ಕೂ ಹೆಚ್ಚಿನ ಯುವಕರ ತಂಡ ಕುರ್ಚಿಗಳನ್ನು ತೂರಿದರು. ಸಿಪಿಐ ಮಹೇಶ್ ಕುಮಾರ್ ತಕ್ಷಣ ಕುರ್ಚಿ ತೂರಾಟದಲ್ಲಿ ತೊಡಗಿದ್ದವರನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರೂ ಗದ್ದಲ, ಕೂಗಾಟ, ತಡೆಯಲು ಆಗಲಿಲ್ಲ. ತಕ್ಷಣ ವೇದಿಕೆಯಿಂದ ಇಳಿದ ಶಾಸಕರು ನಿವೇಶನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸೋಣ ಎಂದು ಸಮಾಧಾನ ಪಡಿಸಿದರು. ನಂತರ ಎಲ್ಲ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ನಿವೇಶನ ಮಂಜೂರಾಗಿರುವ ಸ್ಥಳಕ್ಕೆ ಬಂದರು.
ಗ್ರಾಮದ ಮುಖಂಡ ಮುನೇಗೌಡ ಮಾತನಾಡಿ, ಕಳೆದ 20 ವರ್ಷಗಳಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಎಲ್ಲಾ ಸಮುದಾಯದ ಕಡುಬಡವರು 53ರ ನಮೂನೆ ಅರ್ಜಿ ಸಲ್ಲಿಸಿಕೊಂಡಿದ್ದರೂ ಇದುವರೆಗೂ ಸರ್ಕಾರ ನಿವೇಶನ ಮಂಜೂರು ಮಾಡಿಲ್ಲ. ಈಗ ಯಾರದೋ ಮರ್ಜಿಗೆ ಸ್ಥಳಿಯರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಅರ್ಹರಿಗೆ ನಿವೇಶನ ನೀಡಲೇಬೇಕು ಎಂದರು ಆಗ್ರಹಿಸಿದರು.
ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ದೇವರಾಜ್ ಮಾತನಾಡಿ, 1994ರಿಂದ ಇದುವರೆಗೂ ಪ್ರತಿಯೊಂದು ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಮಂಡಿಸಿ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಪ್ರತಿಯನ್ನು ರವಾನಿಸಲಾಗಿದೆ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೂ ಪ್ರತ್ಯೇಕ ಮನವಿ ಸಲ್ಲಿಸಿ ಕೋರಲಾಗಿದೆ. ಆದರೂ ಕ್ರಮಕೈಗೊಂಡಿಲ್ಲ. ಗ್ರಾಮ ಪಂಚಾಯಿತಿಯೇ ಸ್ಥಳಿಯ ಸರ್ಕಾರವೆಂದು ಪಂಚಾಯತ್ ರಾಜ್ ಕಾಯ್ದೆ ತಿಳಿಸುತ್ತದೆ. ಠರಾವಿಗೆ ಬೆಲೆ ಇಲ್ಲದ ಮೇಲೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಏಕೆ ಎಂದು ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.
ಗ್ರಾ.ಪಂ. ಸದಸ್ಯ ರಾಜೇಂದ್ರ ಮಾತನಾಡಿ, ಗ್ರಾಮದಲ್ಲಿನ ಅಶಾಂತಿಗೆ ತಹಶೀಲ್ದಾರ್ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳೇ ಕಾರಣ, ಸ್ಥಳಿಯರಿಗೆ ಮಾಹಿತಿ ಇಲ್ಲದೆ ಸರ್ವೆ ಮಾಡಿದ್ದು, ತಾಲ್ಲೂಕು ಅಧಿಕಾರಿಗಳು ಗೌಪ್ಯವಾಗಿ ಸರ್ಕಾರಕ್ಕೆ ವರದಿ ನೀಡಿದ್ದರಿಂದ ಸಮಸ್ಯೆಯಾಗಿದೆ. ಸತತ ಹೋರಾಟಕ್ಕೆ ಬೆಲೆ ಇಲ್ಲ. ಆದರೆ ರಾತ್ರೋ ರಾತ್ರಿ ಐದು ಎಕರೆ ಭೂಮಿ ಮಂಜೂರು ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಮಾಜಿ ಯೋಧನ ಪತ್ನಿ ಸುಭಾಷಿಣಿ ವಸಂತ ಅವರ ಬಗ್ಗೆ ಗೌರವವಿದೆ. ಆದರೆ ಸರ್ಕಾರ ಈಗ ಮಂಜೂರು ಮಾಡಿರುವ 5 ಎಕರೆ ಜಮೀನಿನಲ್ಲಿ ಅವಲಕೊಂಡ ಸ್ವಾಮಿ ದೇವಾಲಯವಿದ್ದು, ಮುಜುರಾಯಿ ಇಲಾಖೆಗೆ ಸೇರಿದೆ.
ಈಗಾಗಲೇ 80ಕ್ಕೂ ಹೆಚ್ಚು ಗುಡಿಸಲುಗಳಿವೆ ಸ.ನಂ.223ರ ಪಕ್ಕದಲ್ಲೆ ಯೋಧರ ಪತ್ನಿಗೆ ಜಮೀನು ನೀಡಲಿ. ಸರ್ಕಾರ ಪದೇ ಪದೇ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸುವುದು ಸೂಕ್ತವಲ್ಲ. ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚೆಲ್ಲಾಟವಾಡಬಾರದು. ರಕ್ತ ಹರಿದರೂ ಒಂದಿಂಚು ಭೂಮಿ ನೀಡುವುದಿಲ್ಲ. ಇದು ಗ್ರಾಮಸ್ಥರ ಒಮ್ಮತದ ನಿರ್ಣಯ ಎಂದು ಖಡಕ್ ಎಚ್ಚರಿಕೆ ನೀಡಿದರು.
ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಸರ್ಕಾರ ಏಕಾಏಕಿ ನಿರ್ಧಾರ ಕೈಗೊಂಡಿದೆ. ದೇಶ ಸೇವೆಯಲ್ಲಿ ಪ್ರಾಣ ಕಳೆದುಕೊಂಡ ಯೋಧರ ಪತ್ನಿ ಬಗ್ಗೆ ಗೌರವವಿದೆ. ಆದರೆ ಒಬ್ಬರನ್ನು ಸಂತೈಸಲು ನೂರಾರು ಕುಟುಂಬಗಳನ್ನು ಬೀದಿಗೆ ತರಲು ಸಾಧ್ಯವಿಲ್ಲ. ಗ್ರಾಮಕ್ಕೆ ಹೊಂದಿಕೊಂಡಿರುವ ಜಾಗ ಗ್ರಾಮಸ್ಥರಿಗೆ ಬೇಕು. ಯೋಧರ ಪತ್ನಿ ಬದಲಿ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು ಜನಸಾಮಾನ್ಯರ ನ್ಯಾಯಯುತ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ ಎಂದರು.
ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, ಸರ್ಕಾರದ ಆದೇಶವನ್ನು ಪಾಲಿಸುವುದು ಅಧಿಕಾರಿಗಳ ಕರ್ತವ್ಯ . ಅದನ್ನು ತಿರಸ್ಕರಿಸುವಂತಿಲ್ಲ. ಮುಖಂಡರೊಂದಿಗೆ ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ ಅನಗತ್ಯ ಅಧಿಕಾರಿಗಳ ಮೇಲೆ ಅಪವಾದ ಹೊರಿಸುವುದು ಬೇಡ ಎಂದರು.
ತಾ.ಪಂ. ಅಧ್ಯಕ್ಷ ವೆಂಕಟೇಶಮ್ಮ, ಉಪಾಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣ, ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷೆ ಜಯಸುಧಾ ಮೂಕ ಪ್ರೇಕ್ಷಕರಾದರೆ ವಿವಿಧ ಇಲಾಖೆ ಅಧಿಕಾರಿಗಳು ಜಾಗಖಾಲಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.