ಕನಕಪುರ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗೆ ಬಹುಮತದ ಆತಂಕ ಇರಬಹುದು. ಜೆ.ಡಿ.ಎಸ್.ಗೆ 113 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮರಳವಾಡಿ ಹೋಬಳಿ ಗೆಂಡೆಗೌಡನದೊಡ್ಡಿ ಗ್ರಾಮದಲ್ಲಿ ಅಪಘಾತದಿಂದ ಮೃತಪಟ್ಟ ಆಶ್ರಮ ಶಾಲೆಯ ವಿದ್ಯಾರ್ಥಿ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆ.ಡಿ.ಎಸ್. ಜನರ ನೋವಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಅವರಿಗೆ ಅವಕಾಶ ಕೊಡಬೇಕು. ರೈತರ ಪರ ಸರ್ಕಾರ ಬರಬೇಕೆಂದು ರಾಜ್ಯದ ಜನರು ದೃಢ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಕುರಿತು ಒಳ್ಳೆಯ ಮಾತು ಆಡಿರಬಹುದು. ಅದಕ್ಕೆ ಜನರು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು ಎಂದರು. ಚನ್ನಪಟ್ಟಣದಲ್ಲಿ ಸ್ಥಳೀಯರನ್ನು ಚುನಾವಣೆಗೆ ನಿಲ್ಲಿಸಲಾಗುವುದು. ಪಕ್ಷದ ಮುಖಂಡರು ಒತ್ತಡ ಹೇರುವ ಮೂಲಕ ಇಕ್ಕಟ್ಟಿಗೆಸಿಲುಕಿಸುತ್ತಿದ್ದಾರೆ ಎಂದರು. ಮುಂದೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.
ಪಕ್ಷದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು ಆರೋಗ್ಯದ ಸಮಸ್ಯೆಯಿಂದ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದು 20 ಗಂಟೆಗಳ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಶೀಘ್ರವಾಗಿ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಜೆ.ಡಿ.ಎಸ್. ಮುಖಂಡರಾದ ಮರಿಲಿಂಗೇಗೌಡ, ಡಿ.ಎಂ.ವಿಶ್ವನಾಥ್, ಡಿ.ಎಸ್.ಭುಜಂಗಯ್ಯ, ರಾಮಕೃಷ್ಣ, ಭೈರಪ್ಪ, ದಾಸಪ್ಪ, ಸಿದ್ದರಾಜು, ನಾರಾಯಣಗೌಡ, ಜೈರಾಮೇಗೌಡ, ನಾಗೇಶ್, ವೆಂಕಟೇಶ್ನಾಯ್ಕ್, ಆನಂದ, ರಾಜು, ರಾಮತ್ವುಲ್ಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.