ಮಾಗಡಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ತಗ್ಗೀಕುಪ್ಪೆ ಗ್ರಾಮದಲ್ಲಿ ಮಾಗಡಿ ಕೆಂಪೇಗೌಡ ವಿನಾಯಕ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಟಿ.ಎ.ರಂಗಯ್ಯ ಮತ್ತು ಶಿವರಾಮು ಸ್ಮರಣಾರ್ಥ ಏರ್ಪಡಿಸಿದ್ದ ವಿನಾಯಕ ಉತ್ಸವದಲ್ಲಿ ಅವರು ಮಾತನಾಡಿದರು.
ಆದರೂ, ಬೇರೆ ಪಕ್ಷಗಳ ಬೆಂಬಲವಿಲ್ಲದೆ ರಾಜ್ಯದ ಅಧಿಕಾರ ಹಿಡಿಯುತ್ತೇವೆ ಎಂದು ಎಚ್.ಡಿ. ದೇವೇಗೌಡ ಅವರು ಹಾಸನಾಂಬೆಯ ಮೇಲೆ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ ಎಂದರು.
ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲ್ಲುವುದೇ ಕಷ್ಟ. ಚುನಾವಣೆ ನಂತರ ಇನ್ನೂ 20 ಜೆಡಿಎಸ್ ಶಾಸಕರು ಪಕ್ಷಾಂತರ ಮಾಡಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಗೆಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.
‘ಜೆಡಿಎಸ್ ಪಕ್ಷದ ಬಂಡಾಯ ಶಾಸಕರಾಗಿರುವ ನಾವೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು. ಅಂದು ಬಿಎಸ್ ಯಡಿಯೂರಪ್ಪ ಅವರಿಗೆ 20 ತಿಂಗಳು ಅಧಿಕಾರ ಬಿಟ್ಟುಕೊಡು ಕುಮಾರಣ್ಣ ಎಂದು ಕಾಲು ಹಿಡಿದು ಬೇಡಿಕೊಂಡೆವು. ಕೊಟ್ಟ ಮಾತನ್ನು ಕುಮಾರ ಸ್ವಾಮಿ ಉಳಿಸಿಕೊಳ್ಳಲಿಲ್ಲ’ ಎಂದರು.
ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು ಎಂಬ ಚಿಂತನೆಯಿಂದ ಕಾಂಗ್ರೆಸ್ ಸೇರಿದ್ದೇನೆ ಎಂದರು. ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯಾಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ , ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್, ವಿಎಸ್ಎಸ್ಎನ್ ಅಧ್ಯಕ್ಷ ಚಂದ್ರೇಗೌಡ, ಮುಖಂಡ ಮುದ್ದಣ್ಣ, ಕೃಷ್ಣಪ್ಪ, ಜಿಲ್ಲಾ ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮಣ್, ಟ್ರಸ್ಟಿನ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು. ಸಂಗೀತ ಸಂಜೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.