ಮಾಗಡಿ: ಸಾರ್ವಜನಿಕ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಅದ್ದೂರಿ ಗಣೇಶೋತ್ಸವ ನಡೆಸಲಾಗುತ್ತಿದೆ. ನವೆಂಬರ್ ಕೊನೆ ವಾರದಲ್ಲಿ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ ನಡೆಸುವ ಮೂಲಕ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಹಿಂದೂ ಮಹಾಗಣಪತಿ ಅಂಗವಾಗಿ ಶುಕ್ರವಾರ ರಾತ್ರಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಿಸೆಂಬರ್ನಲ್ಲಿ ಜಿಲ್ಲಾ ಮಟ್ಟದಲ್ಲಿ ಕನಕೋತ್ಸವ ನಡೆಯಲಿದೆ. ಯುವಕರು, ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮಾಗಡಿ ಕೆಂಪೇಗೌಡ ಬೆಂಗಳೂರು ನಿರ್ಮಾತೃ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ₹103 ಕೋಟಿಯಲ್ಲಿ ಮಾಗಡಿ ಕೋಟೆ ಅಭಿವೃದ್ಧಿಪಡಿಸಿ ಇತಿಹಾಸ ಮರುಕಳಿಸುವ ರೀತಿ ಮಾಡಲಿದ್ದಾರೆ. ಕೋಟೆ ಒಳಗೆ ಕ್ರೀಡಾಂಗಣ ಎರಡು ವರ್ಷದಲ್ಲಿ ಅಭಿವೃದ್ಧಿಯಾಗಲಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬಿಡದಿಯಲ್ಲಿ ಟೌನ್ ಶಿಪ್ ಎಐ ಸಿಟಿ ನಿರ್ಮಾಣ ಘೋಷಣೆ ಮಾಡಲಾಗಿದೆ. ಅಭಿವೃದ್ಧಿ ವೇಗ ಬೇರೆ ರೀತಿಯಲ್ಲಿ ಸಾಗಲಿದೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿತ ತಾಲ್ಲೂಕು ಅಣೆ ಪಟ್ಟಿಯನ್ನು ಐದು ವರ್ಷದಲ್ಲಿ ಅಳಿಸುವ ಕೆಲಸ ಮಾಡಲಾಗುವುದು. ಬಮೂಲ್ ಶ್ರಯೋಭಿವೃದ್ಧಿಗೆ ದುಡಿಯಲಾಗುವುದು ಎಂದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಅದ್ದೂರಿಯಾಗಿ ಮಾಗಡಿಯಲ್ಲಿ ಗಣೇಶೋತ್ಸವ ನಡೆಸಲಾಗುತ್ತಿದೆ ಎಂದರು.
ಗ್ಯಾರಂಟಿ ಅನುಷ್ಠಾನದ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿದರು.
ಸರಿಗಮಪ ಖ್ಯಾತಿಯ ಗಾಯಕರಿಂದ ಅದ್ದೂರಿ ಮ್ಯೂಸಿಕಲ್ ನೈಟ್ ಮನರಂಜನೆ ನೀಡಿತು. ಮಿಮಿಕ್ರಿ ಖ್ಯಾತಿಯ ಗೋಪಿ ಜನರನ್ನು ರಂಜಿಸಿದರು.
ಮುಖಂಡರಾದ ಜೆ.ಪಿ.ಚಂದ್ರೇಗೌಡ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬಿ.ಎಸ್.ಕುಮಾರ್, ಕಾಂತರಾಜು, ಪೊಲೀಸ್ ವಿಜಿ, ರೂಪೇಶ್ ಕುಮಾರ್, ಅಶ್ವಥ್, ಅನಿಲ್ ಕುಮಾರ್, ಚಿಗಳೂರು ಗಂಗಾಧರ್, ನರಸಿಂಹಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.