ದೇವನಹಳ್ಳಿ: ಸರ್ಕಾರ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ವಿಶೇಷ ಅನುದಾನವನ್ನು ಉಚಿತವಾಗಿ ನೀಡುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಕೃಷಿ ಜಂಟಿ ನಿರ್ದೇಶಕರ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಂಜಣ್ಣ ತಿಳಿಸಿದರು.
ಗುರುಭವನದಲ್ಲಿಯ ತಾಲ್ಲೂಕು ಸಹಾಯಕ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ 2014ನೇ ಸಾಲಿನ ತಾಲ್ಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿನ ಚಟುವಟಿಕೆಗಳ ಪರಿಪೂರ್ಣ ಮಾಹಿತಿ ರೈತರಿಗೆ ಸಕಾಲದಲ್ಲಿ ತಲುಪುವಂತಹ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವಿನೋದಮ್ಮ ಮಾತನಾಡಿ, ‘ಬೇಸಾಯಕ್ಕೆ ಪೂರಕವಾದ ತಾಂತ್ರಿಕತೆ ಅನಿವಾರ್ಯ. ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯಾಗಲೇಬೇಕು. ಇದಕ್ಕಾಗಿ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಲೋಹಾರ ಮಾತನಾಡಿ, ಕೃಷಿ ಹೊಂಡ ಬದುಗಳಲ್ಲಿ ಹಣ್ಣಿನ ಮರಗಳನ್ನು ಬೆಳೆಸುವುದನ್ನು ರೈತರು ಮರೆಯಬಾರದು ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಆಸ್ಮಾ ತಾಜ್ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಆಶಾಲತಾ, ವೃತ್ತ ನಿರೀಕ್ಷಕ ಮಹೇಶ್ ಕುಮಾರ್, ಕೃಷಿ ವಿಜ್ಞಾನಿ, ಬಾನುಮತಿ, ಪದ್ಮಾವತಿ, ಚೌಡರೆಡ್ಡಿ, ಕೃಷಿ ಇಲಾಖೆ ಅಧಿಕಾರಿ ಅನ್ಸಾರಿ ಹಾಗೂ ವೆಂಕಟೇಶ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಕೆ.ಎಸ್.ಹರೀಶ್, ಕೃಷಿಕ ಸಮಾಜ ಖಜಾಂಚಿ ಲಕ್ಷ್ಮಿನರಸಿಂಹ ಸ್ವಾಮಿ, ನಿರ್ದೇಶಕ ಎಚ್.ಎಂ.ರವಿಕುಮಾರ್, ರೈತ ಸಂಘದ ಅಧ್ಯಕ್ಷ ಗಾರೆ ರವಿಕುಮಾರ್, ರೈತ ಮುಖಂಡ ಗೋಪಾಲಸ್ವಾಮಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.