ADVERTISEMENT

ಪೂರ್ಣಯ್ಯನ ಛತ್ರ ಅಭಿವೃದ್ಧಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 9:09 IST
Last Updated 24 ಅಕ್ಟೋಬರ್ 2017, 9:09 IST

ರಾಮನಗರ: ನಗರದ ಛತ್ರದ ಬೀದಿಯಲ್ಲಿ ದಿವಾನ್‌ ಪೂರ್ಣಯ್ಯನವರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿರುವ ‘ಪೂರ್ಣಯ್ಯ ಛತ್ರ’ವನ್ನು ದಿವಾನ್‌ ಪೂರ್ಣಯ್ಯ ಸ್ಮಾರಕ ಸಾಂಸ್ಕೃತಿಕ ಭವನವನ್ನಾಗಿ ನಿರ್ಮಿಸಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಬಿ.ಆರ್. ಮಮತಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಜಿಲ್ಲಾ ಕೇಂದ್ರವಾಗಿ ಹತ್ತು ವರ್ಷ ಕಳೆದರೂ ರಾಮನಗರದಲ್ಲಿ ಇಲ್ಲಿವರೆಗೆ ಒಂದು ಸುಸಜ್ಜಿತವಾದ ಸೌಲಭ್ಯವುಳ್ಳ ಭವನವಿಲ್ಲ. ಬಹಳ ಮುಖ್ಯವಾಗಿ ಸಭಾಂಗಣಗಳು ನಗರ ವ್ಯಾಪ್ತಿಯಲ್ಲಿದ್ದರೆ ಹೆಚ್ಚು ಚಟುವಟಿಕೆ ನಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಛತ್ರದ ಸ್ಥಳದಲ್ಲಿ ಅವರದೇ ಹೆಸರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಅನುಕೂಲವಾಗುವಂತೆ ‘ದಿವಾನ್‌ ಪೂರ್ಣಯ್ಯ ಸ್ಮಾರಕ ಸಾಂಸ್ಕೃತಿಕ ಭವನ’ ನಿರ್ಮಿಸಬೇಕು. ಈ ಶಿಥಿಲ ಕಟ್ಟಡ ಹೀಗೆ ನಿರ್ಲಕ್ಷ್ಯಕ್ಕೆ ಒಳಗಾದರೆ ಐತಿಹಾಸಿಕ ಹಿನ್ನೆಲೆಯ ಮಹತ್ವ ಮುಂದಿನ ತಲೆಮಾರಿಗೆ ಮರೆತು ಹೋಗುತ್ತದೆ ಎಂದರು.

ADVERTISEMENT

ಜಿಲ್ಲಾಡಳಿತ ಕೂಡಲೇ ಈ ಸ್ಥಳವನ್ನು ವಶಕ್ಕೆ ಪಡೆದು, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ.ಆರ್. ಮಮತಾ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ರಾಜು ಅವರಿಗೂ ಮನವಿ ಸಲ್ಲಿಸಲಾಯಿತು. ಸಂಸ್ಕೃತಿ ಸೌರಭ ಟ್ರಸ್ಟಿನ ಅಧ್ಯಕ್ಷ ರಾ.ಬಿ. ನಾಗರಾಜ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಶ್‌ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್, ಜಯರಾಂ, ಜನಮುಖಿ ಟ್ರಸ್ಟಿನ ಕಾರ್ಯದರ್ಶಿ ಕುಂಬಾಪುರ ಬಾಬು, ಹುಣಸನಹಳ್ಳಿ ರಾಮಣ್ಣ, ಗಾಯಕ ಹೊನ್ನಿಗಾನಹಳ್ಳಿ ಸಿದ್ದರಾಜಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.