ADVERTISEMENT

ಪೇಜಾವರ ಶ್ರೀ ಗಡಿಪಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:19 IST
Last Updated 30 ನವೆಂಬರ್ 2017, 9:19 IST
ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟನೆ ನಡೆಯಿತು.
ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟನೆ ನಡೆಯಿತು.   

ರಾಮನಗರ: ‘ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಪೇಜಾವರ ಶ್ರೀಗಳನ್ನು ದೇಶದಿಂದ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ವಾಟರ್‌ ಟ್ಯಾಂಕ್‌ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕಂದಾಯ ಭವನದ ಎದುರು ಹೆದ್ದಾರಿಯಲ್ಲಿ ಪೇಜಾವರ ಶ್ರೀಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಧರಣಿ ಕುಳಿತರು.

ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವನ್ನು ಇಡೀ ದೇಶದ ನಾಗರಿಕರು ಶ್ರೇಷ್ಠ ಎಂದು ಒಪ್ಪಿಕೊಂಡು ಅದರ ಅಡಿಯಲ್ಲಿ ಬದುಕುತ್ತಿದ್ದಾರೆ. ಸಂವಿಧಾನವು ನ್ಯಾಯ, ಸಮಾನತೆ, ಸೋದರತ್ವ, ಸಹಬಾಳ್ವೆಗಳ ಸಂಕೇತವಾಗಿದೆ. ಅದರ ಕುರಿತು ಲಘುವಾಗಿ ಮಾತನಾಡುವ ಮೂಲಕ ಶ್ರೀಗಳು ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರಿಗೆ ಭಾರತದಲ್ಲಿ ಇರುವ ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಸಭೆಯಲ್ಲಿ ಅವರು ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಸಮಾಜದಲ್ಲಿ ಕೋಮುವಾದವನ್ನು ಬಿತ್ತುತ್ತಿದ್ದಾರೆ. ಈ ಕುರಿತು ಅವರು ಬಹಿರಂಗವಾಗಿ ಸಮಾಜದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕು ಎನ್ನುವ ಮೂಲಕ ನಮ್ಮಲ್ಲಿ ಈಗಲೂ ಅಸ್ಪೃಶ್ಯತೆ ಆಚರಣೆಯಲ್ಲಿ ಇದೆ ಎಂಬುದನ್ನು ಶ್ರೀಗಳೇ ಒಪ್ಪಿಕೊಂಡಿದ್ದಾರೆ. ದಲಿತರನ್ನು ದೇವಸ್ಥಾನಗಳ ಒಳಗೆ ಬಿಟ್ಟುಕೊಳ್ಳಬೇಕು ಎನ್ನುವ ಮೂಲಕ ಅವರನ್ನು ಇನ್ನೂ ದೇಗುಲಗಳಿಗೆ ಸೇರಿಸುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಹೀಗೆ ಅನಿಷ್ಟ ಪದ್ಧತಿಗಳನ್ನು ಶ್ರೀಗಳೇ ಪಾಲಿಸುತ್ತಾ ಬಂದಿದ್ದಾರೆ ಎಂದು ದೂರಿದರು.

ಪೇಜಾವರ ಶ್ರೀಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಲಿತ ಒಕ್ಕೂಟಗಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಶಿವಕುಮಾರ ಸ್ವಾಮಿ, ಶಿವಶಂಕರ್, ಜಗದೀಶ್‌, ಪರಮೇಶ್ವರ, ಯೋಗೇಶ್‌, ಗುರುಮಲ್ಲಯ್ಯ, ಲೋಕೇಶ್‌, ಸುನಿಲ್‌, ರೋಹಿತ್, ಕಿರಣ್‌ಕುಮಾರ್, ದುರ್ಗಾಪ್ರಸಾದ್‌, ಧನಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.