ಚನ್ನಪಟ್ಟಣ: ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಲಕಿಯರು ದಾಖಲಾತಿ ಹೊಂದಲು ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ಶಾಲೆಯ ಉಪ
ಪ್ರಾಂಶುಪಾಲರಾದ ಬಿ.ಪಿ.ಪಾರ್ವತಮ್ಮ ಹೇಳಿದರು.
ಶಾಲೆಯಲ್ಲಿ ಸಹ ಶಿಕ್ಷಣ ಪಡೆಯುವ ಅವಕಾಶವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿ
ನಿಯರು ದಾಖಲಾತಿ ಹೊಂದುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಎಂದು ಮನವಿ ಮಾಡಿದರು.
ನೂರು ವರ್ಷಗಳಿಗೂ ಮೀರಿ ವಿದ್ಯಾದಾನ ಮಾಡಿದ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ. ಬಾಲಕರ ಸರ್ಕಾರಿ ಪ್ರೌಢಶಾಲೆ1899ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ಥಾಪಿಸಲ್ಪಟ್ಟಿದ್ದು. 119ವರ್ಷ ಇತಿಹಾಸ ಹೊಂದಿದೆ. ನಾಡಿಗೆ ಬಹಳಷ್ಟು ಶಿಕ್ಷಣ ತಜ್ಞರನ್ನು, ಶಿಕ್ಷಕರನ್ನು, ಮಂತ್ರಿ, ಸಾಹಿತಿ, ಪೊಲೀಸ್ ಅಧಿಕಾರಿಗಳನ್ನು, ಕಲಾವಿದರುಗಳನ್ನು ಶಾಲೆ ಕೊಡುಗೆಯಾಗಿ ನೀಡಿದೆ ಎಂದರು.
ಎಚ್.ಕೆ. ವೀರಣ್ಣಗೌಡ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಟಿ.ಕೆ.ರಾಮರಾವ್, ಪದ್ಮಶ್ರೀ ಪ್ರಶಸ್ತಿ ವಿಜೇತ ಸಿ.ಕೆ.ವೆಂಕಟರಾಮಯ್ಯ, ಮಾಜಿ ಮಂತ್ರಿಗಳಾದ ವಿ.ವೆಂಕಟಪ್ಪ, ಎಸ್.ಕರಿಯಪ್ಪ, ನಾಡೋಜ ದೇ. ಜವರೇಗೌಡ, ಅರ್ಥಶಾಸ್ತ್ರಜ್ಞ ಡಾ.ಕೆ.ವೆಂಕಟಗಿರಿಗೌಡ, ಕಾಳೇಗೌಡ ನಾಗವಾರ, ಸಿ.ಪಿ.ಯೋಗೇಶ್ವರ್ ಮೊದಲಾದ ನೂರಾರು ಸಾಧಕರನ್ನು ಶಾಲೆ ನೀಡಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 45 ಕೊಠಡಿಗಳ ಸುಸಜ್ಜಿತ ಕಟ್ಟಡವಿದೆ. ಇಡೀ ತಾಲ್ಲೂಕಿ
ನಲ್ಲಿ ಯಾವ ಶಾಲೆಯಲ್ಲಿಯೂ ಲಭ್ಯವಿಲ್ಲದ ಐಟಿ ತಂತ್ರಜ್ಞಾನ ಕೋರ್ಸ್, ಆಟೋ ಮೊಬೈಲ್ ಕೋರ್ಸ್ ಲಭ್ಯವಿದೆ. ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ವರ್ಷುಯಲ್ ಕ್ಲಾಸ್, ಉತ್ತಮ ಗ್ರಂಥಾಲಯ, ಪ್ರಯೋಗಶಾಲೆ, ಶೌಚಾಲಯ, ಎನ್.ಸಿ.ಸಿ, ಸೇವಾದಳ, ಸ್ಕೌಟ್ ಮೊದಲಾದ ವಿಶೇಷ ಸೌಲಭ್ಯ ಒಳಗೊಂಡಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡ
ರಲ್ಲೂ ಬೋಧನಾ ಸೌಲಭ್ಯವಿದ್ದು ನುರಿತ ಶಿಕ್ಷಕರ ತಂಡವಿದ್ದು ಸತತವಾಗಿ ಉತ್ತಮ ಫಲಿತಾಂಶ ದಾಖಲಾಗಿದೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಬಾಲಕಿಯರು ಕೂಡ ಸಹ ಶಿಕ್ಷಣ ಪಡೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಬಾಲಕರು ಕೇವಲ ಸರ್ಕಾರಿ ಶುಲ್ಕ ಮಾತ್ರ ಪಾವತಿಸಬೇಕಾಗಿದ್ದು, ಬಾಲಕಿಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಸರ್ಕಾರದ ಎಲ್ಲಾ ಸೌಲಭ್ಯಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲು ಮಾಡುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.