ADVERTISEMENT

ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾರಾಟ ವ್ಯವಸ್ಥೆ

ಜಾನಪದ ಲೋಕದ ಬಳಿ ಐದು ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 5:07 IST
Last Updated 25 ಮೇ 2018, 5:07 IST
ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಾವಿನ ಹಣ್ಣುಗಳನ್ನು ಕೊಳ್ಳುತ್ತಿರುವ ಗ್ರಾಹಕರು
ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಾವಿನ ಹಣ್ಣುಗಳನ್ನು ಕೊಳ್ಳುತ್ತಿರುವ ಗ್ರಾಹಕರು   

ರಾಮನಗರ: ಇಲ್ಲಿನ ಜಾನಪದ ಲೋಕದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಎಂ.ಪಿ. ಮುಲ್ಲೈ ಮಹೀಲನ್‌ ಗುರುವಾರ ಉದ್ಘಾಟಿಸಿದರು.‌‌

ಗ್ರಾಹಕರಿಗೆ ಗುಣಮಟ್ಟದ ವಿವಿಧ ತಳಿಗಳ ಮಾವಿನ ಹಣ್ಣು ಒದಗಿಸುವ ನಿಟ್ಟಿನಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ 21 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಹಣ್ಣುಗಳನ್ನು ಒದಗಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ಕಾರ್ಬೈಡ್ ಮುಕ್ತ ಹಣ್ಣುಗಳು ಸುಲಭ ದರದಲ್ಲಿ ದೊರೆಯುವಂತೆ ಮಾಡಲಾಗಿದೆ.

ತೋಟಕಾರಿಕೆ ಇಲಾಖೆ ಅಂಗ ಸಂಸ್ಥೆಯಾದ ಹಾಪ್‍ಕಾಮ್ಸ್ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 2010 ರಿಂದಲೂ ಜಿಲ್ಲೆಯಲ್ಲಿ ಈ ಮಾವು ಮಾರಾಟ ಮೇಳ ಆಯೋಜಿಸಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿಯೂ ಗ್ರಾಹಕರಿಂದ ಹೆಚ್ಚಿನ ಆಸಕ್ತಿ ಕಂಡು ಬಂದಲ್ಲಿ ಮೇಳದ ದಿನಾಂಕ ವಿಸ್ತರಿಸಲಾಗುವುದು. ‌

ADVERTISEMENT

ಹಣ್ಣಿನ ದರ:  ಪ್ರತಿ 1ಕೆ.ಜಿ ರತ್ನಗಿರಿ ಆಲ್ಪನ್ಸೋ ತಳಿಗೆ ₹100, ಆಲ್ಪಾನ್ಸೋ ಬಾಕ್ಸ್ ತಳಿಗೆ ₹90, ಅಮ್ರಪಲ್ಲಿ ತಳಿಗೆ ₹75, ಬಾದಾಮಿ ತಳಿಗೆ ₹78, ಬೆನೆಷನ್ (ಬಂಗನಪಲ್ಲಿ) ತಳಿಗೆ ₹62, ಸೇಂದೂರ ತಳಿಗೆ ₹50, ತೋತಾಪುರಿ ತಳಿಗೆ ₹30, ರಸಪುರಿ ತಳಿಗೆ ₹65, ಮಲಗೋವ ತಳಿಗೆ ₹125, ಮಲ್ಲಿಕಾ ತಳಿಗೆ ₹ 88, ದಶಹರಿ ತಳಿಗೆ ₹115 ಹಾಗೂ ನೀಲಂ ತಳಿಗೆ ₹ 60.

ಗಮನ ಸೆಳೆದ ಸಸ್ಯ ಸಂತೆ: ಈ ಬಾರಿ ಮಾವು ಮೇಳದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಸಸ್ಯ ಸಂತೆ ಆರಂಭಿಸಿದೆ. ಇದರಲ್ಲಿ ಇಲಾಖೆ ವತಿಯಿಂದ ಕಸಿ ಮಾಡಿದ ಸಸಿಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ಈ ಸಸ್ಯ ಸಂತೆಯಲ್ಲಿ ತೆಂಗಿನ ಸಸಿ, ಮಾವು ಸಸಿ ಸೇರದಿಂತೆ ಅಲಂಕಾರಿಕ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಮನವಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಮಾವು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಮಾರಕಟ್ಟೆಯಲ್ಲಿ ಸರ್ಕಾರದ ನೀತಿ ಗಾಳಿಗೆ ತೂರಲಾಗಿದೆ. ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಪ್ರಶಾಂತ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಗುಣವಂತ್ ಇದ್ದರು.

ವಿವಿಧ ತಳಿಗಳ ರಸಗವಳ

ಮೇಳದಲ್ಲಿ ರತ್ನಗಿರಿ ಆಲ್ಪನ್ಸೋ, ಆಲ್ಪಾನ್ಸೋ ಬಾಕ್ಸ್, ಅಮ್ರಪಲ್ಲಿ, ಬಾದಾಮಿ, ಬೆನೆಷನ್ (ಬಂಗನಪಲ್ಲಿ), ಸೇಂದೂರ, ತೋತಾಪುರಿ, ರಸಪುರಿ, ಮಲಗೋವ, ಮಲ್ಲಿಕಾ, ದಶಹರಿ, ನೀಲಂ, ಜೀರಿಗೆ ಕಾಯಿ, ಹಿಮಾಮ್ ಪಸಂದ್, ಬಿಬಿ, ಗುಡ್ಡಕಾಯಿ, ಬಂದರಿಯಾ, ಸಕ್ಕರ ಬುತ್ತಿ, ಸುವರ್ಣ ರೇಖಾ, ಸಕ್ಕರೆ ಗೊಲ್ಲ, ಕೆ.ಬಿ,ಹೊಂಗನಪಲ್ಲಿ, ಬೇನಿಷಾ, ಎಂ.ಎಚ್.ಮರಿಗೌಡ, ಗೋಲಾ, ಆಮ್ಲೆಟ್, ವಾಲಣ ಸೇರಿದಂತೆ 30ಕ್ಕು ಹೆಚ್ಚಿನ ತಳಿಗಳ ಮಾವಿನ ಹಣ್ಣುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.