ರಾಮನಗರ: ಮಾಗಡಿಯ ಸಾಲು ಮರದ ತಿಮ್ಮಕ್ಕ ಹೆಸರು ದುರ್ಬಳಕೆ ಮಾಡಿಕೊಂಡು ಅಮೆರಿಕದಲ್ಲಿ ಸಂಸ್ಥೆ ಸ್ಥಾಪಿಸಿ ಅಕ್ರಮವಾಗಿ ಹಣ ಸಂಪಾದಿಸಿ ದ್ದಾರೆ ಎಂಬ ಆರೋಪದ ಮೇಲೆ ಬಂಧಿತರಾಗಿದ್ದ ಪರಿಸರವಾದಿ ರಿತು ಪ್ರಿಮ್ನಾಲಿ ಅವರಿಗೆ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ.
₨ 15 ಸಾವಿರ ಠೇವಣಿ ಹಾಗೂ ಇಬ್ಬರ ವೈಯಕ್ತಿಕ ಭದ್ರತೆ ಆಧಾರದ ಮೇಲೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಷರತ್ತುಗಳು: ಪ್ರಿಮ್ನಾಲಿ ಅವರು ತಮ್ಮ ಪಾಸ್ ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ಪ್ರತಿ ತಿಂಗಳ 20ರಂದು ಪ್ರಿಮ್ನಾಲಿ ಅವರು ಐಜೂರು ಪೊಲೀಸ್ ಠಾಣಾಧಿಕಾರಿಗಳ ಮುಂದೆ ಹಾಜರಾಗಿ ಸಹಿ ಮಾಡಬೇಕು. ಪ್ರಕರಣದ ತನಿಖೆ ನಡೆಸುವ ತನಿಖಾಧಿಕಾರಿಯೊಂದಿಗೆ ತನಿಖೆಗೆ ಸಹಕರಿಸಬೇಕು. ತಮ್ಮ ವಿರುದ್ಧ ದಾವೆ ಹೂಡಿರುವವರಿಗೆ ಯಾವ ತೊಂದರೆ ನೀಡಬಾರದು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ನ್ಯಾಯಾಲಯ ನಿಗದಿ ಪಡಿಸಿದ ವಿಚಾರಣಾ ದಿನಗಳಂದು ತಪ್ಪದೆ ಹಾಜರಾಗಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿದೆ. ಸಾಲು ಮರದ ತಿಮ್ಮಕ್ಕ ಅವರು ದಾಖಲಿಸಿದ್ದ ಖಾಸಗಿ ದಾವೆ ಮತ್ತು ನ್ಯಾಯಾಲಯದ ಆದೇಶದ ಮೇರೆಗೆ ಕಳೆದ 19ರಂದು ರಿತು ಪ್ರಿಮ್ನಾಲಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ನ್ಯಾಯಾಲಯ ಸೋಮವಾರದವರೆಗೆ ಬಂಧನಕ್ಕೆ ಆದೇಶ ನೀಡಿತ್ತು. ನಂತರ ಅವರನ್ನು ಗುರುವಾರದವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿತ್ತು.
ಪದಾಧಿಕಾರಿಗಳ ಆಯ್ಕೆ: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಎಲ್.ಸಿ.ಮಹದೇವಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆರ್.ರುದ್ರೇಶಯ್ಯ, ಎಸ್.ಬಿ. ಬಸವರಾಜಪ್ಪ, ಖಜಾಂಚಿ ಟಿ.ಎಂ. ಪ್ರಕಾಶ್, ಸಹ ಕಾರ್ಯದರ್ಶಿ ಎಂ.ಎನ್. ದೇವರಾಜ, ಸಂಘಟನಾ ಕಾರ್ಯದರ್ಶಿ ಆರ್.ಸಿ.ವಿಜಯ್ ಕುಮಾರ್, ರಾಜ್ಯ ಪರಿಷತ್ತಿನ ಸದಸ್ಯರಾಗಿ ಜಿ. ಶಿವಶಂಕರ್ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.