ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಮೈಸೂರು ರಸ್ತೆಯ ಸಾಸಲಾಪುರ ಗೇಟ್ ಬಳಿ ವಿದ್ಯುತ್ ಪ್ರವಹಿಸಿ ಯುವಕರೊಬ್ಬರು ಭಾನುವಾರ ಬೆಳಿಗ್ಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಸಲಾಪುರ ಗ್ರಾಮದ ಗವಿಯಪ್ಪ ಅವರ ಮಗ ಮಹದೇವ (22) ಎಂದು ಗುರುತಿಸಲಾಗಿದೆ. ಅವರು ಬೆಳಿಗ್ಗೆ ಮೇಕೆಗಳಿಗೆ ಸೊಪ್ಪು ತರಲು ಮೈಸೂರು ಹೆದ್ದಾರಿ ರಸ್ತೆಗೆ ಹೋದವರು ಬಾರದಿದ್ದಾಗ ಅವರ ಸ್ನೇಹಿತ ವೆಂಕಟೇಶ್ ಎಂಬುವರು ಮರದ ಕೆಳಗೆ ಬೈಕ್ ನಿಂತಿದ್ದನ್ನು ನೋಡಿದಾಗ ವಿಷಯ ತಿಳಿದಿದೆ.
ಗವಿಯಪ್ಪ ಮತ್ತು ವೆಂಕಟಮ್ಮ ಅವರಿಗೆ ಇಬ್ಬರು ಮಕ್ಕಳು, ಶಿವಕುಮಾರ್ ಅವಿದ್ಯಾವಂತನಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ಮೃತ ಮಹದೇವ ಪದವಿ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.
ಬಡ ಕುಟುಂಬವಾದ್ದರಿಂದ ಜೀವನೋಪಾಯಕ್ಕಾಗಿ ಮನೆಯಲ್ಲಿ ಮೇಕೆಗಳನ್ನು ಸಾಕಿದ್ದು ಅವುಗಳಿಗೆ ಸೊಪ್ಪು ತರಲೆಂದು ಬಂದಾಗ ದುರ್ಘಟನೆ ನಡೆದಿದೆ. ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದರಿಂದ ಮೃತರ ಪೋಷಕರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿದ್ಯುತ್ ತಂತಿ ಕೆಳಕ್ಕೆ ಬಿದ್ದಿರಲಿಲ್ಲ. ಸೊಪ್ಪು ಕೊಯ್ಯುವ ವೇಳೆ ತಂತಿಗೆ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿರಬಹುದು ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ವರದಿ ಬಂದಮೇಲೆ ಕಾರಣ ಸ್ಪಷ್ಟವಾಗಲಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.