ರಾಮನಗರ: ‘ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಯ ಜೀವನಮಟ್ಟವನ್ನು ಹೆಚ್ಚಿಸುವಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸಿದೆ’ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಅಪ್ಪಯ್ಯಣ್ಣ ಹೇಳಿದರು.
ತಾಲ್ಲೂಕಿನ ಕೈಲಂಚ ಹೋಬಳಿಯ ಕವಣಾಪುರ ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಅನೇಕ ಜನಪರವಾದ ಯೋಜನೆಗಳನ್ನು ತರುವ ಮೂಲಕ ಕೆಎಂಎಫ್ ಮತ್ತು ಬೆಂಗಳೂರು ಹಾಲು ಒಕ್ಕೂಟ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದರಿಂದ ಜನರು ಸರ್ಕಾರಿ ಉದ್ಯೋಗ ಅರಸಿ ಬೆಂಗಳೂರಿನಂತಹ ಮಹಾನಗರಿಗೆ ಹೋಗುವ ಬದಲು ಹೈನುಗಾರಿಕೆ ಕ್ಷೇತ್ರವನ್ನು ಆರಿಸಿಕೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ನಿದರ್ಶನಗಳು ಹೆಚ್ಚಾಗುತ್ತಿವೆ’ ಎಂದರು.
ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜ್ ಮಾತನಾಡಿ ‘ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರಿಗೆ ನೆರವಾಗುವ ಕಾರ್ಯಾಗಾರಗಳನ್ನು ನಡೆಸುವತ್ತ ಚಿಂತನೆ ಮಾಡುವ ಅಗತ್ಯವಿದೆ. ಇದರಿಂದ ರೈತ ಸಮುದಾಯಕ್ಕೆ ಅನುಕೂಲವಾಗುತ್ತದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಶಿವಲಿಂಗಯ್ಯ, ಎಂಪಿಸಿಎಸ್ ಅಧ್ಯಕ್ಷ ಶಿವಲಿಂಗಯ್ಯ, ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ, ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ, ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ಶಿವಶಂಕರ್, ಡಾ. ಶ್ರೀನಿವಾಸ್, ವಿಸ್ತರಣಾಧಿಕಾರಿಗಳಾದ ಜಯರಾಮಯ್ಯ, ಕವಿತಾ, ಉಮೇಶ್, ಸಂಘದ ಕಾರ್ಯದರ್ಶಿ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಭವ್ಯಸುರೇಂದ್ರ, ಸುಶೀಲ, ಮುಖಂಡರಾದ ಲಿಂಗೇಗೌಡ, ಅಶ್ವತ್ಥ್, ಪುರುಷೋತ್ತಮ್, ಸುಂದರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.