ADVERTISEMENT

‘ಸ್ಪರ್ಧಾತ್ಮಕ ಪರೀಕ್ಷೆಗೆ ಸತತ ಅಭ್ಯಾಸವೇ ಜಯದ ಅಸ್ತ್ರ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:55 IST
Last Updated 16 ಸೆಪ್ಟೆಂಬರ್ 2013, 9:55 IST

ರಾಮನಗರ: ಸತತ ಅಭ್ಯಾಸ ಮತ್ತು ಶಿಸ್ತಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಡಿವೈಎಸ್ಪಿ ಎಂ.ಎನ್. ರಾಮಲಿಂಗಪ್ಪ ತಿಳಿಸಿದರು.

ನಗರದ ಗುರುಭವನದಲ್ಲಿ ಚಿನ್ಮಯ್ ಅಕಾಡೆಮಿ ವತಿಯಿಂದ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

'ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದರೆ ಸಾಲದು. ಆ ಹುದ್ದೆಗೆ ನಿಗದಿಪಡಿಸಿರುವ ಪಠ್ಯಕ್ರಮವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತವಾದ ಹುದ್ದೆಯನ್ನು ಪಡೆಯಲು ಸತತ ಪ್ರಯತ್ನ ನಡೆಸಬೇಕು’ ಎಂದು ಅವರು ಕಿವಿಮಾತು ಹೇಳಿದರು. 

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲ ಯತ್ನದಲ್ಲೇ ವಿಫಲವಾದರೂ ಚಿಂತೆ ಮಾಡದೆ ಮರು ಪ್ರಯತ್ನ ನಡೆಸಿ. ನಿರುತ್ಸಾಹಕ್ಕೆ ಒಳಗಾಗದೆ ಸಕಾರತ್ಮಕ ಭಾವನೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಚಿನ್ಮಯ್ ಅಕಾಡೆಮಿಯ ನಿರ್ದೇಶಕ  ಎನ್. ನಂಜುಂಡೇಗೌಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗ್ರಾಮಾಂತರ ವಿದ್ಯಾರ್ಥಿಗಳಲ್ಲಿ ತಪ್ಪು ಕಲ್ಪನೆಗಳಿವೆ. ನಗರ ಪ್ರದೇಶದವರು ಮಾತ್ರ ಹೆಚ್ಚು ಯಶಸ್ಸುಗಳಿಸುತ್ತಾರೆ ಎಂಬ ಭಾವನೆ ಜನರಲ್ಲಿದೆ. ಅದನ್ನು ಹೋಗಲಾಡಿಸಿ, ಗ್ರಾಮೀಣ ಭಾಗದ ಜನರಲ್ಲಿ ಆತ್ಮಸ್ಥೈರ್ಯ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಚಿನ್ಮಯ್‌ ಅಕಾಡೆಮಿ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅಕಾಡೆಮಿಯ ಮಂಜುನಾಥ್, ಅಪ್ಪಾಜಿಗೌಡ, ಪ್ರದೀಪ್ ಅಪ್ಪಗೆರೆ, ಶಿವಣ್ಣ, ಲೋಕೇಶ್, ವರದರಾಜು, ಸಮತಾ ಸಂಸ್ಥೆಯ ಕೆ.ಎಲ್. ಕಿರಣ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.