ADVERTISEMENT

ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 6:44 IST
Last Updated 20 ಜನವರಿ 2018, 6:44 IST
ಹಾರೋಬೆಲೆ ಗ್ರಾಮದ ರೈತರ ಹೊಲದಲ್ಲಿ ಅಳವಡಿಸಿರುವ ಸೌರಶಕ್ತಿ ಉತ್ಪಾದನಾ ಘಟಕ
ಹಾರೋಬೆಲೆ ಗ್ರಾಮದ ರೈತರ ಹೊಲದಲ್ಲಿ ಅಳವಡಿಸಿರುವ ಸೌರಶಕ್ತಿ ಉತ್ಪಾದನಾ ಘಟಕ   

ರಾಮನಗರ: ರೈತರ ಹೊಲದಲ್ಲಿ ಸೌರಶಕ್ತಿ ಉತ್ಪಾದನೆ ಮೂಲಕ ಕೃಷಿ ಪಂಪ್‌ಸೆಟ್‌ಗೆ ನಿರಂತರ ವಿದ್ಯುತ್‌ ಪೂರೈಸುವ ಮಹಾತ್ವಾಕಾಂಕ್ಷೆ ಯೋಜನೆಯಾದ ‘ಸೂರ್ಯ ರೈತ’ ಶುಕ್ರವಾರ ಅಧಿಕೃತವಾಗಿ ಚಾಲನೆಗೊಂಡಿತು.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಬೆಲೆ ಬಳಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಹಾರೋಬೆಲೆ ಫೀಡರ್ ವ್ಯಾಪ್ತಿಯ 11 ಹಳ್ಳಿಗಳ 310 ಕೊಳವೆ ಬಾವಿಯುಳ್ಳ ರೈತರನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದರಲ್ಲಿ ಈಗಾಗಲೇ 250 ಹೊಲಗಳಲ್ಲಿ ಸೌರ ವಿದ್ಯುತ್‌ ಘಟಕಗಳನ್ನು ಅಳವಡಿಸಲಾಗಿದ್ದು, ಸೌರ ವಿದ್ಯುತ್‌ ಉತ್ಪಾದನೆ ನಡೆದಿದೆ. ಒಂದು ವರ್ಷದಿಂದ ಈ ಯೋಜನೆಯು ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ರೈತರು ವಿದ್ಯುತ್‌ ಸ್ವಾವಲಂಬನೆಯ ಜೊತೆಗೆ 4 ಲಕ್ಷ ಯೂನಿಟ್‌ನಷ್ಟು ವಿದ್ಯುತ್‌ ಅನ್ನು ಬೆಸ್ಕಾಂಗೆ ಮಾರಾಟ ಮಾಡಿದ್ದಾರೆ.

ADVERTISEMENT

ಉತ್ಪಾದನೆ ಹೇಗೆ?: ಫಲಾನುಭವಿ ರೈತರ ಹೊಲಗಳಲ್ಲಿ ಬೆಸ್ಕಾಂ ವತಿಯಿಂದ ಸೌರಶಕ್ತಿ ಉತ್ಪಾದನಾ ಕೋಶಗಳನ್ನು ಅಳವಡಿಸಲಾಗುತ್ತಿದೆ. 5 ಅಶ್ವಶಕ್ತಿ ಹಾಗೂ 7.5 ಅಶ್ವಶಕ್ತಿ ಸಾಮರ್ಥ್ಯದ ಪತ್ಯೇಕ ಘಟಕಗಳು ಇದ್ದು, ಹೊಲದ ವಿಸ್ತೀರ್ಣಕ್ಕೆ ಅನುಗುಣವಾಗಿ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದರಲ್ಲಿ ಉತ್ಪಾದನೆಯಾದ ಸೌರಶಕ್ತಿಯು ಇನ್‌ವರ್ಟರ್‌ನಲ್ಲಿ ಸಂಗ್ರಹ ಆಗಲಿದ್ದು, ನಂತರದಲ್ಲಿ ಅದನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಲಾಗುತ್ತದೆ. ಈ ಇನ್‌ವರ್ಟರ್‌ಗೆ ಎರಡು ಸಂಪರ್ಕಗಳನ್ನು ನೀಡಲಾಗಿದ್ದು, ಒಂದು ಸಂಪರ್ಕವು ನೇರವಾಗಿ ಕೃಷಿ ಪಂಪ್‌ಸೆಟ್‌ಗೆ ಇದೆ. ಇದರಿಂದ ಅಡಚಣೆ ರಹಿತ ವಿದ್ಯುತ್ ಸರಬರಾಜು ಸಾಧ್ಯ ಆಗಲಿದ್ದು, ರೈತರು ವಿದ್ಯುತ್‌ಗಾಗಿ ಇಂಧನ ಇಲಾಖೆಗೆ ಅವಲಂಬಿತರಾಗುವುದು ತಪ್ಪಲಿದೆ.

ಇನ್‌ವರ್ಟರ್‌ನ ಮತ್ತೊಂದು ಸಂಪರ್ಕವನ್ನು ಬೆಸ್ಕಾಂನ ವಿದ್ಯುತ್‌ ಮಾರ್ಗದೊಡನೆ ಜೋಡಿಸಲಾಗಿದೆ. ರೈತರು ವಿದ್ಯುತ್‌ ಬಳಸದ ಸಂದರ್ಭದಲ್ಲಿ ಹಾಗೂ ಹೆಚ್ಚುವರಿಯಾಗಿ ವಿದ್ಯುತ್‌ ಉತ್ಪಾದನೆ ಆಗುವ ವಿದ್ಯುತ್‌ ಈ ಮಾರ್ಗದ ಮೂಲಕ ಬೆಸ್ಕಾಂಗೆ ಸರಬರಾಜು ಆಗುತ್ತಿದೆ. ಹೀಗೆ ಸರಬರಾಜು ಆಗುವ ವಿದ್ಯುತ್‌ ಮಾಪನಕ್ಕೆ ಮೀಟರ್ ಅಳವಡಿಸಲಾಗಿದೆ. ಬೆಸ್ಕಾಂಗೆ ಸರಬರಾಜು ಆಗುವ ವಿದ್ಯುತ್‌ಗೆ ಪ್ರತಿಯಾಗಿ ರೈತರಿಗೆ ಹಣ ಸಂದಾಯವಾಗಲಿದೆ.

ಸರ್ಕಾರದ ಸಹಾಯ ಧನ: ಇಂಧನ ಇಲಾಖೆಯು ಎಂ.ಎನ್‌.ಆರ್‌.ಇ ಸಹಾಯಧನದೊಂದಿಗೆ ಈ ಸೌರಶಕ್ತಿ ಕೋಶಗಳನ್ನು ಅಳವಡಿಸಿಕೊಡುತ್ತಿದೆ. 5 ಎಚ್‌.ಪಿ. ಸಾಮರ್ಥ್ಯದ ಘಟಕಕ್ಕೆ ₹7.13 ಲಕ್ಷ ಹಾಗೂ 7.5 ಎಚ್‌.ಪಿ. ಸಾಮರ್ಥ್ಯದ ಘಟಕಕ್ಕೆ ₹9.43 ಲಕ್ಷ ವೆಚ್ಚ ತಗುಲಲಿದೆ. ಇದರಲ್ಲಿ ಸರ್ಕಾರಿ ಸಹಾಯಧನದ ಜೊತೆಗೆ ರೈತರೂ ಒಂದು ಪಾಲನ್ನು ಭರಿಸಬೇಕಾಗುತ್ತದೆ. ಯೋಜನಾ ವೆಚ್ಚದ ಶೇ 80ರಷ್ಟು ಹಣವು ಬ್ಯಾಂಕುಗಳಿಂದ ರೈತರಿಗೆ ಸಾಲವಾಗಿ ಸಿಗುತ್ತಿದೆ. ಈ ಹಣವನ್ನು ಬೆಸ್ಕಾಂ ಗ್ಯಾರಂಟಿಯೊಂದಿಗೆ ಬಡ್ಡಿರಹಿತವಾಗಿ ನೀಡಲಾಗುತ್ತಿದೆ.

25 ವರ್ಷದ ಒಪ್ಪಂದ: ರೈತರಿಂದ ಹೆಚ್ಚುವರಿ ವಿದ್ಯುತ್‌ ಖರೀದಿಗೆ ಬೆಸ್ಕಾಂ 25 ವರ್ಷದ ಒಪ್ಪಂದ ಮಾಡಿಕೊಂಡಿದೆ. ಪ್ರತಿ ಯೂನಿಟ್‌ಗೆ ₹7.20 ದರ ನಿಗದಿಪಡಿಸಿದೆ. ಇದರಲ್ಲಿ ಸಾಲದ ಹಣವನ್ನು ಮುರಿದುಕೊಳ್ಳಲಾಗುತ್ತಿದೆ. ರೈತರಿಗೆ ಪ್ರೋತ್ಸಾಹಧನವಾಗಿ ಪ್ರತಿ ಯೂನಿಟ್‌ಗೆ ಒಂದು ರೂಪಾಯಿ ನೀಡಲಾಗುತ್ತಿದೆ. ಒಂದು ಘಟಕದಲ್ಲಿ ದಿನಕ್ಕೆ ಸರಾಸರಿ 30 ಯೂನಿಟ್‌ನಷ್ಟು ವಿದ್ಯುತ್‌ ಖರೀದಿ ಮಾಡಲಾಗುತ್ತಿದ್ದು, ದಿನಕ್ಕೆ ₹30 ರೈತರ ಕೈ ಸೇರುತ್ತಿದೆ. ಈ ಯೋಜನೆಯ ನಿರ್ವಹಣೆಗೆ ಬೆಸ್ಕಾಂ ‘ಸೂರ್ಯ ರೈತ’ ಕೃಷಿ ವಿದ್ಯುಚ್ಛಕ್ತಿ ಬಳಕೆದಾರರ ಸಹಕಾರ ಸಂಘವನ್ನು ರಚಿಸಿದೆ.

ಕಾಡುಪ್ರಾಣಿಗಳ ಕಾಟ ತಪ್ಪಿತು

ಯೋಜನೆಯಿಂದ ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಸಿಗುತ್ತಿದೆ. ಇದರಿಂದ ರಾತ್ರಿ ಹೊತ್ತು ಹೊಲದಲ್ಲಿ ಅಲೆಯುವುದು ತಪ್ಪಿದೆ. ಕಾಡುಪ್ರಾಣಿಗಳ ದಾಳಿಯಿಂದ ಜನರ ಪ್ರಾಣ ಉಳಿದಿದೆ. ‘ಸೌರಶಕ್ತಿ ಯೋಜನೆ ಬಂದ ಮೇಲೆ ನಮಗೆ ಹಗಲು ಹೊತ್ತು ಪೂರ್ತಿ ವಿದ್ಯುತ್ ಸಿಗುತ್ತಿದೆ. ಇದರಿಂದ ಕಾಡುಪ್ರಾಣಿಗಳ ದಾಳಿಯು ಕಡಿಮೆ ಆಗಿದೆ. ಬೇಕಾದ ಬೆಳೆ ಬೆಳೆದು ಲಾಭ ಗಳಿಸುತ್ತಿದ್ದೇವೆ. ಹೆಚ್ಚುವರಿ ವಿದ್ಯುತ್‌ ಮಾರಾಟದಿಂದ ಹಣವೂ ಕೈ ಸೇರುತ್ತಿದೆ’ ಎಂದು ಹಾರೋಬೆಲೆಯ ರೈತ ಶಂಕರ್‌ ಹೇಳಿದರು.

* * 

ದೇಶದಲ್ಲಿಯೇ ಇದೊಂದು ವಿನೂತನ ಯೋಜನೆ ಆಗಿದೆ. ಇದಕ್ಕಾಗಿ ಇಂಧನ ಇಲಾಖೆಯು ₹24.36 ಕೋಟಿ ವ್ಯಯಿಸುತ್ತಿದೆ.
ಡಿ.ಕೆ. ಶಿವಕುಮಾರ್
ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.