ADVERTISEMENT

‘2 ವರ್ಷಗಳಲ್ಲಿ ಪೋಲಿಯೋಮುಕ್ತ ಜಗತ್ತು’

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 6:55 IST
Last Updated 28 ಜನವರಿ 2018, 6:55 IST

ಕನಕಪುರ: ಭಾರತ ದೇಶವು ಅತ್ಯಂತ ಕಠಿಣ ಪರಿಶ್ರಮದಿಂದ ಪೋಲಿಯೋಮುಕ್ತ ರಾಷ್ಟ್ರವಾಗಿದ್ದು, ಇನ್ನೆರಡು ವರ್ಷದಲ್ಲಿ ಪೊಲೀಯೋಮುಕ್ತ ವಿಶ್ವವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಹೇಳಿದರು.

ನಗರದಲ್ಲಿ ಪೋಲಿಯೋ ಕುರಿತು ರೋಟರಿ ಸಂಸ್ಥೆ ಶನಿವಾರ ನಡೆಸಿದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪೋಲಿಯೋ ಎಂಬುದು ಜನತೆಯನ್ನು ಪಿಡುಗಾಗಿ ಶಾಶ್ವತ ಅಂಗವಿಕಲರನ್ನಾಗಿ ಮಾಡುವ ಮಹಾಮಾರಿಯಾಗಿತ್ತು ಎಂದು ಅಭಿಪ್ರಾಯಪಟ್ಟರು.

ವಿಶ್ವವನ್ನು ಪೋಲಿಯೋ ಮುಕ್ತವಾಗಿ ಮಾಡಲು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ವರ್ಷದಲ್ಲಿ ಎರಡುರಿಂದ ಮೂರು ಬಾರಿ ಪೋಲಿಯೋ ಹನಿ ಹಾಕುವ ಮೂಲಕ ಅದರ ತಡೆಗೆ ಯತ್ನಿಸಲಾಗುತ್ತಿದೆ ಎಂದರು.

ADVERTISEMENT

ಅದರ ಪ್ರತಿಫಲವಾಗಿ ಇಂದು ಭಾರತ ದೇಶವು ಪೋಲಿಯೋಮುಕ್ತ ರಾಷ್ಟ್ರವಾಗಿದೆ. ಆದರೂ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಒಂದೆರಡು ಪ್ರಕರಣಗಳು ಪತ್ತೆಯಾದ ಕಾರಣ ವಿಶ್ವವ್ಯಾಪ್ತಿ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಸಾಮೂಹಿಕವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪೋಲಿಯೋದಿಂದ ಮುಕ್ತಿ ಹೊಂದಲು ಜನತೆ ಸಂಪೂರ್ಣ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.

ರೋಟರಿ ಜಿಲ್ಲಾ ಸಮಿತಿ ಸದಸ್ಯ ಜೆ.ಪಿ.ಎನ್‌. ಭಾನುಪ್ರಕಾಶ್‌ ಮಾತನಾಡಿ, ಜ.28 ರಿಂದ 31ರ ವರೆಗೆ 4 ದಿನಗಳ ಕಾಲ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ 4 ದಿನ, ಹಳ್ಳಿಯಲ್ಲಿ 3 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮುಕ್ತವಾಗಿ ಸಹಕಾರಿಸಬೇಕು ಎಂದರು. 5 ವರ್ಷದ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಹನಿಗಳನ್ನು ಹಾಕಿಸಬೇಕೆಂದು ಮನವಿ ಮಾಡಿದರು.

ನಗರದ ಎಲ್ಲಾ ರಸ್ತೆಗಳಲ್ಲೂ ಮೆರವಣಿಗೆ ನಡೆಸಿ ಪೋಲಿಯೋ ಮುಕ್ತವನ್ನಾಗಿಸಲು ಜನತೆ ಸಹಕರಿಸುವಂತೆ ಪೋಲಿಯೋ ಮುಕ್ತ ವಿಶ್ವವನ್ನಾಗಿ ಮಾಡುವಂತೆ ಘೋಷಣೆ ಕೂಗಿದರು. ಬ್ಲಾಸಮ್‌, ಬಾಣಂತಮಾರಮ್ಮ, ಜಿ.ಜಿ.ಎಂ.ಎಸ್‌, ನೀಲಕಂಠೇಶ್ವರ, ಜಿ.ಜಿ.ಎಸ್‌.ಎಸ್‌, ಡಿ.ವಿ.ವಿ.ಶಾಲೆಯಿಂದ ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್‌, ರೋಟರಿ ಕ್ಲಬ್‌ನ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಚಿಕ್ಕಸ್ವಾಮಿ, ಪಲ್ಸ್‌ ಪೋಲಿಯೋ ಸಮಿತಿ ತಾಲ್ಲೂಕು ಅಧ್ಯಕ್ಷ ಶಿವಕುಮಾರ್‌, ರೋಟರಿ ಸದಸ್ಯರಾದ ಸಿ.ಎಸ್‌.ನಾಗರಾಜು, ಗೋಪಾಲ್‌, ಮುರಡಿಬಸಪ್ಪ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.