ಮಾಗಡಿ: ಇಂದಿನ ಮಕ್ಕಳು ಪ್ರತಿಭಾವಂತರಾಗಿರುವಷ್ಟೇ ಭಾವನಾತ್ಮಕವಾಗಿಯೂ ತುಂಬಾ ಸೂಕ್ಷ್ಮರಾಗಿದ್ದು, ಸೂಕ್ತ ಮಾರ್ಗದರ್ಶನ ನೀಡಿದರೆ ಬಹುದೊಡ್ಡ ಜವಾಬ್ದಾರಿ ಹೊರಲು ಸಿದ್ಧರಾಗುತ್ತಾರೆ ಎಂದು ಪುರಸಭೆ ಅಧ್ಯಕ್ಷ ಎಚ್.ಆರ್.ಮಂಜುನಾಥ ತಿಳಿಸಿದರು. ಪಟ್ಟಣದ ಭಾನುವಾರ ರಾತ್ರಿ ನಡೆದ ಹೊಸಪೇಟೆ ಮಾರುತಿ ಪಬ್ಲಿಕ್ ಶಾಲೆಯ 16ನೇ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಬೇಕಾದ ಮಾರ್ಗದರ್ಶನ, ಆಸರೆ–ಬೆಂಬಲವನ್ನು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೊಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಯಾರೂ ದಡ್ಡರಿಲ್ಲ. ಸೂಕ್ತ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಮಾರುತಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಅಗತ್ಯ ಪೂರೈಕೆಯಾಗುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾರುತಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಚ್.ಎಚ್.ಗಂಗರಾಜು ತಿಳಿಸಿದರು. ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು ಶಾಲೆಗಳ ಕರ್ತವ್ಯ ಎಂದು ಹಿರಿಯ ವಕೀಲ ಆರ್.ನಾಗೇಶ್ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಘು ಮಾತನಾಡಿ, ಸಂಗೀತ, ನೃತ್ಯ,ನಾಟಕ, ಕ್ರೀಡೆಗಳಿಗೆ ಓದಿನಷ್ಟೇ ಮಹತ್ವ ನೀಡಬೇಕು ಎಂದರು. ಪುರಸಭೆ ಸದಸ್ಯೆ ಸುನಿತಾ ನಾಗರಾಜು, ಮುಖಂಡರಾದ ವಿಜಯಕುಮಾರ್, ಪುರುಷೋತ್ತಮ್, ರಾಜಶೇಖರ್, ಸಂಸ್ಥೆಯ ಆಡಳಿತಾಧಿಕಾರಿ ವರಲಕ್ಷ್ಮೀ,ಕೆ.ಟಿ, ಮುಖ್ಯಶಿಕ್ಷಕ ನರಸಿಂಹಯ್ಯ ಜಿ.ಮಾತನಾಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.