ಚನ್ನಪಟ್ಟಣ: ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದಾಳಿ ನಡೆಸಿದ ಚಿರತೆಯು, ಸೀಮೆಹಸುವೊಂದನ್ನು ಕೊಂದು ಹಾಕಿದೆ.
ಗ್ರಾಮದ ಸಂಜೀವರಾಯಸ್ವಾಮಿ ದೇವಸ್ಥಾನದ ಅರ್ಚಕ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿ ಹಾಕಿದ್ದರು. ರಾತ್ರಿ ಚಿರತೆ ದಾಳಿ ನಡೆಸಿ, ಸೀಮೆಹಸುವನ್ನು ಎಳೆದಾಡಿ ತಿಂದು ಹಾಕಿದೆ. ಹಸು ಮೂರು ತಿಂಗಳ ಗರ್ಭ ಧರಿಸಿತ್ತು. ಇದರಿಂದ ₹40 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಗಳಲ್ಲಿ ಆಗಾಗ ದಾಳಿ ನಡೆಸಿ ಕುರಿ, ಮೇಕೆ, ನಾಯಿ, ಜಾನುವಾರುಗಳನ್ನು ಕೊಂದು ಹಾಕುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದರಿಂದಾಗಿ ಈ ಭಾಗದ ಜನರು ಸದಾ ಭಯದ ವಾತಾವರಣದಲ್ಲೇ ಜೀವಿಸುವಂತಾಗಿದೆ ಎಂದು ಗ್ರಾಮಸ್ಥ ಡಿ.ಬಿ. ಚೇತನ್ ಕುಮಾರ್ ಎಂಬವರು ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿ ಬೋನುಗಳನ್ನಿಟ್ಟು, ಚಿರತೆ ಸೆರೆಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.