ADVERTISEMENT

ರಾಮನಗರ: ಜನರ ಕಷ್ಟಕ್ಕೆ ಸ್ಪಂದಿಸದ ಸರ್ಕಾರ

ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:04 IST
Last Updated 29 ಜುಲೈ 2021, 5:04 IST
ಕನಕಪುರ ತಾಲ್ಲೂಕಿನ ತುಂಗಣಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಮಿಕರಿಗೆ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ರೇಷನ್‌ ಕಿಟ್‌ ವಿತರಿಸಿದರು
ಕನಕಪುರ ತಾಲ್ಲೂಕಿನ ತುಂಗಣಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಮಿಕರಿಗೆ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ರೇಷನ್‌ ಕಿಟ್‌ ವಿತರಿಸಿದರು   

ಕನಕಪುರ: ‘ಕೊರೊನಾ ಸೋಂಕಿನಿಂದ ರಾಜ್ಯದ ಜನತೆ ಅನುಭವಿಸಿರುವನೋವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಆರೋಪಿಸಿದರು.

ತಾಲ್ಲೂಕಿನ ತುಂಗಣಿ ಗ್ರಾಮ ಪಂಚಾಯಿತಿ ಆವರಣದಲ್ಲಿ ತುಂಗಣಿ, ಕಲ್ಲಹಳ್ಳಿ, ಅಳ್ಳಿಮಾರನಹಳ್ಳಿ, ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿಯ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ರೇಷನ್‌ ಕಿಟ್‌ ವಿತರಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೋವಿಡ್‌ ಮೊದಲನೆ ಅಲೆ ಬಂದಾಗಲೇ ತಜ್ಞರು ಎರಡನೇ ಅಲೆ ಬರುವುದನ್ನು ಖಚಿತಪಡಿಸಿದ್ದರು. ಅಗತ್ಯ ಮುಂಜಾಗ್ರತೆ ಮತ್ತು ಕೋವಿಡ್‌ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದರು. ಆದರೆ, ರಾಜ್ಯ ಸರ್ಕಾರ ಅದನ್ನು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಜನರು ನೋವು ಅನುಭವಿಸಬೇಕಾಯಿತು ಎಂದು ದೂರಿದರು.

ADVERTISEMENT

ಜನರ ಪರದಾಟ ಮತ್ತು ನರಳಾಟ ನೋಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೊಂದ ಜನರ ಕಷ್ಟಕ್ಕೆ ಸ್ಪಂದಿಸಿತು. ಆಸ್ಪತ್ರೆ, ಔಷಧಿ ವ್ಯವಸ್ಥೆ, ರೇಷನ್‌ ವಿತರಣೆಯಂತಹ ಕೆಲಸವನ್ನು ಮನೆ ಬಾಗಿಲಿಗೆ ತಲುಪಿಸಿ ಜನರ ನೆರವಿಗೆ ನಿಂತಿದೆ ಎಂದರು.

‘ಶಾಸಕರು ಮತ್ತು ಸಂಸದರು ಕನಕಪುರ ಕ್ಷೇತ್ರದಲ್ಲಿ ವೈಯಕ್ತಿಕವಾಗಿ 75 ಸಾವಿರ ರೇಷನ್‌ ಕಿಟ್‌ ವಿತರಣೆ ಮಾಡಿದ್ದಾರೆ. ಕಾರ್ಮಿಕ ಇಲಾಖೆಯಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 500 ಮಂದಿಗೆ ಕಿಟ್‌ ನೀಡಲಾಗುತ್ತಿದೆ. ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರು ಬೇರೆ ಕೆಲಸಗಳ ಒತ್ತಡದಲ್ಲಿರುವುದರಿಂದ ಕಾರ್ಮಿಕರಿಗೆ ವಿಳಂಬವಾಗಬಾರದೆಂದು ತಾವೇ ಕಿಟ್‌ ವಿತರಣೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಕೃಷ್ಣಮೂರ್ತಿ, ಮುಖಂಡರಾದ ಎಂ. ಪುರುಷೋತ್ತಮ್‌, ರಾಯಸಂದ್ರ ರವಿ, ಕೆ.ಎನ್‌. ದಿಲೀಪ್‌, ಸುಕನ್ಯಾ ರಂಗಸ್ವಾಮಿ, ಕುಂತಿಕಲ್‌ದೊಡ್ಡಿ ಬಸವರಾಜು, ಮೂರ್ತಿ, ಲಿಂಗಣ್ಣ, ಮುದ್ದೇಗೌಡ, ತುಂಗಣಿ ರವಿ, ಮುದ್ದುಕೃಷ್ಣ, ತುಂಗಣಿ ಉಮೇಶ್‌, ಕೈಲಾಸ್‌, ಲ್ಯಾಬ್‌ ಪ್ರಕಾಶ್‌, ತಮ್ಮಯ್ಯ, ಪಂಚಾಯಿತಿ ಅಧ್ಯಕ್ಷರಾದ ಶಿವಕುಮಾರ್‌, ಹೈದರ್‌ಪಾಷ, ಸುಜಾತಾ ಅಶೋಕ್‌ಚಾರ್‌, ರೇಣುಕಮ್ಮ, ಶಿವಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.