ಕನಕಪುರ:ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳು ಪದೇ ಪದೇ ತನ್ನನ್ನು ಭೇಟಿಯಾಗು
ವಂತೆ ಪೀಡಿಸುತ್ತಿದ್ದರಿಂದ ಬೇಸತ್ತ ಪ್ರಿಯಕರನೇ ಕುತ್ತಿಗೆಗೆ ಬೆಲ್ಟ್ಬಿಗಿದು ಆಕೆಯನ್ನು ಕೊಲೆ ಮಾಡಿದ್ದಾನೆ.
ನಗರದ ಕುರುಪೇಟೆ ಕೆರೆ ಬೀದಿ ರಸ್ತೆ ನಿವಾಸಿ ಶ್ರುತಿ (28) ಕೊಲೆಯಾದ ಮಹಿಳೆ. ಗಾರೆ ಕೆಲಸಗಾರ ಲೋಕೇಶ್ ಎಂಬುವರನ್ನು ಮದುವೆಯಾಗಿದ್ದ ಶ್ರುತಿ ಬೇರೆಯವರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಶ್ರುತಿಯಪ್ರಿಯಕರ ಹನುಮಂತ ಎಂಬ ಯುವಕನನ್ನು ಬಂಧಿಸಿದ್ದಾರೆ. ಆರೋಪಿ ಇನ್ನೂ ಅವಿವಾಹಿತ.
ಶ್ರುತಿ ಮತ್ತು ಆರೋಪಿ ಹನುಮಂತ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದರು. ಪರಿಚಯ ಸಂಬಂಧಕ್ಕೂ ತಿರುಗಿತ್ತು. ಪ್ರತಿದಿನ ಭೇಟಿಯಾಗುವಂತೆ ಪೀಡಿಸುತ್ತಿದ್ದ ಮಹಿಳೆಯ ಕಾಟದಿಂದ ಬೇಸತ್ತುಭಾನುವಾರ ಸಂಜೆ
ಬೈಕ್ನಲ್ಲಿ ಮಾರಣ್ಣನದೊಡ್ಡಿ ರಸ್ತೆಗೆ ಕರೆದೊಯ್ದು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ಶವದ ಬಳಿ ದೊರೆತ ಮೊಬೈಲ್ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
‘ಬೇರೆ ಯುವತಿಯನ್ನು ಮದುವೆ ಆಗುತ್ತೇನೆ. ಸಂಬಂಧ ಮುಂದುವರೆಸುವುದು ಬೇಡ ಎಂದು ಬೇಡಿಕೊಂಡಿದ್ದೆ. ಇದಕ್ಕೆ ಆಕೆ ಒಪ್ಪಲಿಲ್ಲ. ಯಾರನ್ನೂ ಮದುವೆಯಾಗದಂತೆ ಬೆದರಿಕೆ ಒಡ್ಡಿದ್ದಳು. ಆಕೆಯ ಕಾಟದಿಂದ ತಪ್ಪಿಸಿಕೊಳ್ಳಲು ಈಚೆಗೆ
ಮೊಬೈಲ್ ಸಂಖ್ಯೆ ಕೂಡ ಬದಲಿಸಿಕೊಂಡಿದ್ದೆ. ಯಾರಿಂದಲೋ ನನ್ನ ಹೊಸ ಸಂಖ್ಯೆ ಪತ್ತೆ ಹಚ್ಚಿ ಭಾನುವಾರ ಬೆಳಿಗ್ಗೆ ನನ್ನ ಹೊಸ ನಂಬರ್ಗೆ ಕರೆ ಮಾಡಿದ್ದಳು.
ಮನೆಗೆ ಬರುವಂತೆ ಒತ್ತಡ ಹೇರಿದ್ದಳು. ಆಕೆಯ ಕಾಟದಿಂದ ತಪ್ಪಿಸಿಕೊಳ್ಳಲು ನಿಶ್ಚಯಿಸಿ ಬೈಕ್ನಲ್ಲಿ ಕರೆದೊಯ್ದು ಬೆಲ್ಟ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದೆ’ ಎಂದು ಆರೋಪಿಯು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.