ಚನ್ನಪಟ್ಟಣ: ತಾಲ್ಲೂಕಿನ ಅಬ್ಬೂರು ಗ್ರಾಮದ ಲೇಖಕ ಪ್ರಕಾಶ್ ಅವರಿಗೆ 2023ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಬಹುಮಾನ ದೊರೆತಿದೆ.
ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾವ್ ಅವರು ಗುರುವಾರ ಅಕಾಡೆಮಿಯ ವಿವಿಧ ವಿಭಾಗಗಳ ದತ್ತಿ ಬಹುಮಾನಗಳನ್ನು ಪ್ರಕಟಿಸಿದ್ದು, ಅಬ್ಬೂರು ಪ್ರಕಾಶ್ ಅವರು ಪ್ರಕಟಿಸಿರುವ ‘ಕಣ್ಣ ಕನ್ನಡಿಯಲ್ಲಿ’ ಕೃತಿಗೆ ಈ ಬಹುಮಾನ ದೊರೆತಿದೆ.
ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಅವರ ಮೊದಲ ಸ್ವತಂತ್ರ ಕೃತಿ ಕಣ್ಣ ಕನ್ನಡಿಯಲ್ಲಿ. ಈ ಕೃತಿಯಲ್ಲಿ ತಮ್ಮ ಸ್ವಗ್ರಾಮ ಅಬ್ಬೂರಿನ ಚಿತ್ರಣವನ್ನು ನೀಡಿದ್ದಾರೆ. ಹಾಗೆಯೆ ‘ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ’ ಮಕ್ಕಳ ಅನುವಾದ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಪರಿಚಯ: ತಾಲ್ಲೂಕಿನ ಅಬ್ಬೂರು ಗ್ರಾಮದ ವೆಂಕಟಮ್ಮ ರಂಗೇಗೌಡ ದಂಪತಿಯ ಪುತ್ರರಾದ ಪ್ರಕಾಶ್ ಅವರು ಸ್ವಗ್ರಾಮ ಅಬ್ಬೂರಿನಲ್ಲಿ ಪ್ರಾಥಮಿಕ ಶಿಕ್ಷಣ, ದಶವಾರದಲ್ಲಿ ಮಾಧ್ಯಮಿಕ ಶಿಕ್ಷಣ, ನಾಗವಾರದಲ್ಲಿ ಪ್ರೌಢ ಶಿಕ್ಷಣ ಮುಗಿಸಿದವರು. ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮೂರು ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸಿದ್ದ ಇವರು, ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಸಹಾಯಕ ನಿರ್ದೇಶಕರಾಗಿ, ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.