ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆ. ಗೊಲ್ಲಹಳ್ಳಿ ಸಮೀಪ ಶುಕ್ರವಾರ ಕಾರ್ ಒಂದು ಎರಡು ಸ್ಕೂಟರ್ಗಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಒಬ್ಬರು ಮೃತಪಟ್ಟು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕುಳ್ಳೆಗೌಡನಪಾಳ್ಯದ ನಿವಾಸಿ ಗಿರಿಯಪ್ಪ (50) ಮೃತರು. ಕೆ. ಗೊಲ್ಲಹಳ್ಳಿ ಗ್ರಾಮದ ವಿದ್ಯಾರ್ಥಿನಿಯರಾದ ಯೋಗಿತಾ (10), ಚರಿತಾ (8) ಹಾಗೂ ಗೋಣಿಪುರ ಗ್ರಾಮದ ಲತೇಶ್ (45) ಎಂಬುವರು ಗಾಯಗೊಂಡಿದ್ದಾರೆ.
ಗಿರಿಯಪ್ಪ ತಮ್ಮ ಸಂಬಂಧಿಕರಾದ ವಿದ್ಯಾರ್ಥಿನಿಯರನ್ನು ಶಾಲೆಗೆ ಬಿಡುವ ಸಲುವಾಗಿ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಮತ್ತೊಂದು ಸ್ಕೂಟರ್ನಲ್ಲಿ ಲತೇಶ್ ಸಹ ಕುಂಬಳಗೋಡು ಕಡೆ ತೆರಳುತ್ತಿದ್ದರು. ಈ ವೇಳೆ ಕುಂಬಳಗೋಡಿನಿಂದ ಬಿಡದಿ ಕಡೆಗೆ ಬರುತ್ತಿದ್ದ ಕಾರ್ ಚಾಲಕನಅಜಾಗರೂಕತೆಯಿಂದ ಸ್ಕೂಟರ್ಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಗಿರಿಯಪ್ಪ ತೀವ್ರ ಗಾಯಗಳಿಂದ ಮಾರ್ಗ ಮಧ್ಯೆಯೇ ಮೃತಪಟ್ಟರು.
ಜಿಗಣಿ ಬಳಿಯ ಖಾಸಗಿ ಕಾಲೇಜೊಂದರ ಮೂವರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಸ್ವಿಫ್ಟ್ ಕಾರಿನಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಬಿಡದಿಗೆ ಜಾಲಿರೈಡ್ ಹೊರಟಿದ್ದರು ಎನ್ನಲಾಗಿದೆ. ಈ ವೇಳೆ ಅಪಘಾತ ಸಂಬಂಧಿಸಿದ್ದು, ಅಲ್ಲಿಂದ ಪರಾರಿಯಾದ ವಿದ್ಯಾರ್ಥಿಗಳು ಕಗ್ಗಲೀಪುರ ಠಾಣೆಗೆ ಬಂದು ಶರಣಾಗಿದ್ದಾರೆ. ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.