ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಹಾರೋಹಳ್ಳಿ: ಇಲ್ಲಿನ ತಹಶೀಲ್ದಾರ್ ಶಿವಕುಮಾರ್ ಆರ್.ಸಿ ಅವರನ್ನು ಕರ್ತವ್ಯಲೋಪದ ಆಧಾರದ ಮೇಲೆ ಅಮಾನತು ಮಾಡಿರುವುದನ್ನು ಖಂಡಿಸಿ, ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬಾಯಿಗೆ ಕಪ್ಪು ಬಟ್ಟೆ ಧರಿಸಿ, ಪ್ರತಿಭಟನಾ ಫಲಕಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲ್ಲೂಕಿಗೆ ಪ್ರಾಮಾಣಿಕ ಅಧಿಕಾರಿ ಬೇಕೇ ಬೇಕು ಎಂದು ಘೋಷಣೆ ಹಾಕಿ, ಶಿವಕುಮಾರ್ ಅಮಾನತು ಆದೇಶ ಹಿಂಪಡೆಯುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಇದೇ ವೇಳೆ ಕಚೇರಿಗೆ ಬಂದ ಪ್ರಭಾರ ತಹಶೀಲ್ದಾರ್ ಅವರನ್ನು ಸಹ ಪ್ರತಿಭಟನಾಕಾರರು ಒಳಕ್ಕೆ ಬಿಡಲಿಲ್ಲ. ಈ ವೇಳೆ ಅಧಿಕಾರಿ ಮತ್ತು ಪ್ರತಿಭಟನಾನಿರತರ ಮಧ್ಯೆ ವಾಗ್ವಾದ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಸಮಾಧಾನಪಡಿಸಿದರು. ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದರು.
ರೈತಪರ, ದಲಿತಪರ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.