ಮಾಗಡಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಸವಿತಾ ಸಮಾಜದ ಸಂಘದ ವತಿಯಿಂದ ಮಂಗಳವಾರ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.
ಮಹರ್ಷಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶಿರಸ್ತೇದಾರ್ ಶಿವಮೂರ್ತಿ ಮಾತನಾಡಿ, ‘ಸವಿತಾ ಎಂಬ ಪದದ ಅರ್ಥವು ವಿಷ್ಣು ಸಹಸ್ರನಾಮದ ಪ್ರಕಾರ ಸಕಲ ಜಗತ್ತನ್ನು ರಕ್ಷಿಸಿ, ನಡೆಸುವವನು ಎಂಬುದಾಗಿದೆ. ಸವಿತಾ ಮಹರ್ಷಿಗಳ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಪುರಸಭೆ ಸದಸ್ಯ ಎಚ್.ಜೆ. ಪುರುಷೋತ್ತಮ್ ಮಾತನಾಡಿ, ‘ಸವಿತಾ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು. ಪುರಸಭೆಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಸವಿತಾ ಮಹರ್ಷಿಗಳ ಜಯಂತಿ ಆಚರಣೆಗೆ ₹25 ಸಾವಿರ ಸಹಾಯಧನ ನೀಡುವಂತೆ ನಿಯಮಾವಳಿ ರೂಪಿಸಿದ್ದೆ’ ಎಂದರು.
ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮುನಿಕೃಷ್ಣ ಎಂ ಮಾತನಾಡಿ, ‘ಫೆ.9ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸವಿತಾ ಮಹರ್ಷಿಗಳ ಜಯಂತಿ ಆಚರಿಸಲಾಗುವುದು. ಸವಿತಾ ಸಮಾಜದವರು ಭಾಗವಹಿಸಬೇಕು. ಫೆ.20ರ ನಂತರ ತಾಲ್ಲೂಕು ಮಟ್ಟದ ಸವಿತಾ ಸಮಾಜದ ಸಮಾವೇಶ ನಡೆಸಿ, ಜಾಗೃತಿ ಮೂಡಿಸಲಾಗುವುದು’ ಎಂದರು.
ಸವಿತಾ ಸಮಾಜದ ಪ್ರಕಾಶ್, ಉಪಾಧ್ಯಕ್ಷ ನರಸಿಂಹ, ಶಾಂತಕುಮಾರ್, ತಿರುಮಲೆ ವೆಂಕಟೇಶ್, ನವೀನ್, ಚಿರಂಜೀವಿ, ಹರೀಶ್, ಚಿನ್ನರಾಜು, ಪತ್ರಕರ್ತ ಮುನಿಯಪ್ಪ, ವೆಂಕಟಾಂಜನಪ್ಪ, ಲೋಕೇಶ್, ನರಸಿಂಹಮೂರ್ತಿ, ಎಂ.ಜಿ. ರಂಗನಾಥ್, ಕೇಶವಮೂರ್ತಿ, ರಾಮಚಂದ್ರ, ಮೋಹನ್ಕುಮಾರ್, ತೇಜಸ್ ಕುಮಾರ್, ಸವಿತಾ ಮಹರ್ಷಿಗಳ ಆದರ್ಶಗಳ ಕುರಿತು ಮಾತನಾಡಿದರು.
ಸವಿತಾ ಸಮಾಜ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ ಸವಿತಾ ಸಮಾಜದವರ ಸೇವೆಯೂ ಮನುಷ್ಯನ ಜನನದಿಂದ ಮರಣದವರೆಗೆ ಅಗತ್ಯವಾಗಿದೆ ಎಂದರು.
ಬಾಳೇನಹಳ್ಳಿ ಪರಮೇಶ್, ಯೋಗೀಶ್, ಎನ್.ಮುನಿರಾಜು ಹಾಗೂ ಸಮಾಜದ ಯುವಕರು ಸೇರಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು, ಬ್ರೆಡ್ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.