ಮಾಗಡಿ: ‘ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ತಿಳಿಸುವುದರ ಜೊತೆಗೆ ಅವರಲ್ಲಿ ಸುಪ್ತವಾಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಿದೆ’ ಎಂದು ಆರ್ಯ ಈಡಿಗರ ನಾರಾಯಣಗುರು ಮಠ, ರೇಣುಕಾ ಮಹಾಸಂಸ್ಥಾನ ಪೀಠದ ಅಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ತಿಳಿಸಿದರು.
ಸೋಲೂರಿನ ಆರ್ಯ ಈಡಿಗರ ನಾರಾಯಣಗುರು ಮಠದ ಆವರಣದಲ್ಲಿರುವ ಬ್ರಿಲಿಯಂಟ್ ವ್ಯಾಲಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಶನಿವಾರ ನಡೆದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಜನಪದ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಆದಿಮೂಲ ಸಮುದಾಯಗಳ ಜನಪದ ಪರಂಪರೆ, ಬೇಸಾಯ ಕ್ರಮ, ಆಚಾರ ವಿಚಾರದ ಬಗ್ಗೆ ಬಾಲ್ಯದಲ್ಲಿಯೇ ಕಲಿಸಿಕೊಡಬೇಕು ಎಂದು ಸಲಹೆ
ನೀಡಿದರು.
ಶಾಲೆಗಳು ಕೇವಲ ಓದು, ಬರಹ ಬಲ್ಲವರನ್ನು ತಯಾರು ಮಾಡಿದರೆ ಸಾಲದು. ಬುದ್ಧ, ಮಹಾವೀರ, ಬಸವಣ್ಣ, ನಾರಾಯಣಗುರು, ಜ್ಯೋತಿಬಾ ಫುಲೆ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಆದರ್ಶಗಳನ್ನು ಪಾಲಿಸಬೇಕು. ಸಮಾನತೆ ಸಾರುವ ಸೌಹಾರ್ದ ಸಂಸ್ಕೃತಿಯನ್ನು ಕಲಿಸಿಕೊಡಬೇಕಿದೆ ಎಂದು ಹೇಳಿದರು.
ಬ್ರಿಲಿಯಂಟ್ ವ್ಯಾಲಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ. ರಾಜಶೇಖರಯ್ಯ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಸುಸಜ್ಜಿತ ಶಿಕ್ಷಣ ದೊರಕುವಂತಾಗಬೇಕು ಎಂದರು.
ಶಾಲೆಯ ಮ್ಯಾನೇಜಿಂಗ್ ಪಾರ್ಟನರ್ ಐಶ್ವರ್ಯ ಚೇತನ್ ಕುಮಾರ್, ಪ್ರಾಂಶುಪಾಲೆ ವಾಣಿಶ್ರೀ ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.