ADVERTISEMENT

ಕುರುಹಿನಶೆಟ್ಟಿ ಜನಾಂಗ ಸಂಘದ ಸಭೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 7:46 IST
Last Updated 8 ನವೆಂಬರ್ 2021, 7:46 IST
ಸತ್ಯನಾರಾಯಣ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕುರುಹಿನಶೆಟ್ಟಿ ಜನಾಂಗದ ಸಂಘದ ಪದಾಧಿಕಾರಿಗಳು
ಸತ್ಯನಾರಾಯಣ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕುರುಹಿನಶೆಟ್ಟಿ ಜನಾಂಗದ ಸಂಘದ ಪದಾಧಿಕಾರಿಗಳು   

ಕನಕಪುರ: ಕುರುಹಿನಶೆಟ್ಟಿ ಜನಾಂಗವು ಸಾಮಾಜಿಕವಾಗಿ ಹಿಂದುಳಿದಿದೆ. ಸರ್ಕಾರದಿಂದ ಜನಾಂಗಕ್ಕೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಸಮುದಾಯದ ಮುಖಂಡ, ವಕೀಲ ವಿಜಯಕುಮಾರ್‌ ತಿಳಿಸಿದರು.

ಇಲ್ಲಿನ ಮೇಗಳಬೀದಿಯ ಸತ್ಯನಾರಾಯಣ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕುರುಹಿನಶೆಟ್ಟಿ ಜನಾಂಗ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಸಮುದಾಯದವರು ಸಂಘಟಿತ ಹೋರಾಟದ ಮೂಲಕ ತಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿಯು ಮುಂದಿನ ದಿನಗಳಲ್ಲಿ ಸಂಘದಿಂದ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಸವಲತ್ತುಗಳನ್ನು ಪಡೆದುಕೊಳ್ಳಲು ಎಲ್ಲರೂ ಸಂಘದ ಜತೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಸಮುದಾಯದಲ್ಲಿ ಆರ್ಥಿಕವಾಗಿ ಅನುಕೂಲ ಇರುವವರು ಸಂಕಷ್ಟದಲ್ಲಿರುವ ಸಮುದಾಯದ ಜನಕ್ಕೆ ಸಹಾಯ ಮಾಡಬೇಕು. ಪ್ರತಿಭಾನ್ವಿತರಾಗಿದ್ದು ಓದಿನಲ್ಲಿ ಆಸಕ್ತಿ ಹೊಂದಿರುವ ಬಡ ಮಕ್ಕಳನ್ನು ಗುರುತಿಸಿ ಅವರ ಓದಿಗೆ ನೆರವು ನೀಡಬೇಕು. ಕೆಳಸ್ತರದಲ್ಲಿ ಇರುವವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ, ಗೌರವಾಧ್ಯಕ್ಷ ಚನ್ನನರಸಿಂಹಯ್ಯ ಸೇರಿದಂತೆ ಸಮುದಾಯದ ಮುಖಂಡರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಸಂಘದ ಗೌರವಾಧ್ಯಕ್ಷರಾಗಿ ಚೆನ್ನನರಸಿಂಹಯ್ಯ, ಅಧ್ಯಕ್ಷರಾಗಿ ದಾಸರಾಜು, ಉಪಾಧ್ಯಕ್ಷರಾಗಿ ಕೆ.ಬಿ. ಜೈಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಎಚ್‌. ರಂಗನಾಥ್, ಸಹ ಕಾರ್ಯದರ್ಶಿಯಾಗಿ ಕೆ.ಎಂ. ಪುಟ್ಟರಾಜ್, ಖಜಾಂಚಿಯಾಗಿ ಕೆ.ಎಲ್‌. ಅನಂತ ನರಸಿಂಹಮೂರ್ತಿ (ಚಾಮು), ನಿರ್ದೇಶಕರಾಗಿ ಕೆ.ಎಸ್‌. ಭಾಸ್ಕರ್, ಕೆ.ಎಲ್‌. ನಾಗರಾಜ್, ಕುಮಾರ್, ಕೆ.ಎನ್‌. ದಿಲೀಪ್ ಕೃಷ್ಣ, ದಯಾನಂದ್, ರಾಜು, ವೆಂಕಟೇಶ್, ಪ್ರಭು, ಎನ್‌.ಎಲ್‌. ಕೇಶವ, ದೇವರಾಜ್, ಕೆ.ಆರ್‌. ನಟರಾಜ್ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.