ಮಾಗಡಿ: ‘ಮಿಶ್ರತಳಿ ಅಭಿವೃದ್ಧಿಪಡಿಸಿ ಆರ್ಗ್ಯಾನಿಕ್ ಹಾಲು ಉತ್ಪಾದಿಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು’ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ತಾಲ್ಲೂಕಿನ ಅರಳುಕುಪ್ಪೆಯಲ್ಲಿ ಗುರುವಾರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಅರಳುಕುಪ್ಪೆಯಲ್ಲಿ ₹ 19.96 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ರೈತರು ಗುಣಮಟ್ಟದ ಹಾಲು ಉತ್ಪಾದಿಸಬೇಕು. ರಾಸುಗಳ ಆರೋಗ್ಯದತ್ತ ಗಮನಹರಿಸಬೇಕು. ಹಾಲಿಗೆ ನೀರು ಬೆರೆಸಬೇಡಿ. ಮಹಿಳೆಯರು ಶ್ರಮದಾಹಿಗಳು ಎಂದರು.
2019–20ನೇ ಸಾಲಿನಲ್ಲಿ ಸಂಘ ₹ 3,87,331 ನಿವ್ವಳ ಲಾಭ ಗಳಿಸಿದೆ. ನಿತ್ಯ ಹಾಲು ಉತ್ಪಾದಕರಿಗೆ ₹ 18 ಸಾವಿರ ಸಂದಾಯವಾಗುತ್ತಿದೆ ಎಂದು ವಿವರಿಸಿದರು.
ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಉಮಾ ಸಂಘದ ಬೆಳವಣಿಗೆ ಬಗ್ಗೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಎನ್. ಅಶೋಕ್, ಹಾಲು ಒಕ್ಕೂಟದ ಅಧಿಕಾರಿ ಡಾ.ರಾಕೇಶ್ ಅಂಗಡಿ, ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ನಂಜೇಗೌಡ, ಮುಖಂಡರಾದ ಸಿಗೇಕುಪ್ಪೆ ಶಿವಣ್ಣ, ಕೋರಮಂಗಲದ ಶ್ರೀನಿವಾಸ್, ಬೆಳಗುಂಬ ವಿಜಯಕುಮಾರ್, ಮಲಿಯಪ್ಪನಪಾಳ್ಯದ ಧನಂಜಯ, ಜುಟ್ಟನಹಳ್ಳಿ ಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂತರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.