ಚನ್ನಪಟ್ಟಣ: ‘ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಹಾಗೂ ದಲಿತ ವಿರೋಧಿ ನಡೆಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಕಾಂಗ್ರೆಸ್ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶೇಖರ್ ತಿಳಿಸಿದರು.
ನಗರ ಹೊರವಲಯದ ಖಾಸಗಿ ಹೋಟೆಲ್ವೊಂದರಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ನಲ್ಲಿ ದಲಿತ ಸಮುದಾಯವನ್ನು ಕಡೆಗಣಿಸುವ ಪ್ರವೃತ್ತಿಯಿದೆ. ಜೊತೆಗೆ, ಪಕ್ಷದಲ್ಲಿ ನಾಯಕತ್ವದ ಕೊರತೆಯಿದೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ಚನ್ನಪಟ್ಟಣಕ್ಕೆ ಬರುತ್ತಾರೆ. ಬಳಿಕ ಕ್ಷೇತ್ರದತ್ತ ಮುಖ ಮಾಡುವುದಿಲ್ಲ. ಕಳೆದ ಐದು ವಿಧಾನಸಭಾ ಚುನಾವಣೆಯಲ್ಲಿ ಐವರು ಅಭ್ಯರ್ಥಿಗಳು ಬಂದಿದ್ದಾರೆ. ಪ್ರತಿ ಚುನಾವಣೆಗೂ ಹೊಸ ಅಭ್ಯರ್ಥಿ ಬರುತ್ತಾರೆ. ನಂತರ ಮಾಯವಾಗುತ್ತಾರೆ. ಪಕ್ಷದ ನಾಯಕರು ಕಾರ್ಯಕರ್ತರ ಕಷ್ಟ, ಸುಖ ಕೇಳುವುದಿಲ್ಲ ಎಂದರು.
‘ಚನ್ನಪಟ್ಟಣ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ. ಅವರು ಕೇವಲ ತಾವು ಬೆಳೆಯಬೇಕು ಎನ್ನುವ ಉದ್ದೇಶದಿಂದ ಇತರರನ್ನು ಬೆಳೆಯಲು ಬಿಡುವುದಿಲ್ಲ. ಹಲವು ಬಾರಿ ಈ ಬಗ್ಗೆ ನಾಯಕರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಪಕ್ಷದಲ್ಲಿ ದಲಿತ ನಾಯಕರು, ಮುಖಂಡರಿಗೆ, ಕಾರ್ಯಕರ್ತರಿಗೆ ಬೆಲೆಯಿಲ್ಲ. ಹಾಗಾಗಿ, ನಾನು ಮತ್ತು ಪಕ್ಷದ ಕೆಲವು ದಲಿತ ಮುಖಂಡರು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.
ಬಿಜೆಪಿ ಸೇರ್ಪಡೆಯಾಗುತ್ತೇವೆ: ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ‘ದಲಿತರ ನಡೆ ಯೋಗೇಶ್ವರ್ ಕಡೆ’ ಎಂಬ ಕಾರ್ಯಕ್ರಮ ಮಾಡಿ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ದಲಿತರ ಸಮಾವೇಶ ಮಾಡುತ್ತೇವೆ. ಈ ವೇಳೆ ಬಹಳಷ್ಟು ಜನರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ತೊರೆದು ಸಿ.ಪಿ. ಯೋಗೇಶ್ವರ್ ನಾಯಕತ್ವ ಒಪ್ಪಿಕೊಂಡು ನೂರಾರು ಮಂದಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಡಾ.ಲೋಕಾನಂದ್, ಕೇಶವ ಮೂರ್ತಿ, ಪುರುಷೋತ್ತಮ್, ನಾರಾಯಣ ಮೂರ್ತಿ, ಭೀಮಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.