ADVERTISEMENT

ಕನಕಪುರ: ‘ಆನೆಕಾಡು’ ಬ್ರ್ಯಾಂಡ್ ಆಹಾರ ಉತ್ಪನ್ನ ಬಿಡುಗಡೆ

ಕಾಡಂಚಿನ ಪ್ರದೇಶಗಳ ಕೃಷಿ ಉತ್ಪನ್ನಗಳು; ಅರಣ್ಯ ಇಲಾಖೆಯಿಂದ ದೇಶದಲ್ಲೇ ಮೊದಲ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:42 IST
Last Updated 8 ಜನವರಿ 2026, 4:42 IST
<div class="paragraphs"><p>ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆರ್‌ಎಫ್‌ಒ ಕಚೇರಿಯಲ್ಲಿ ಆನೆಕಾಡು ಬ್ರ್ಯಾಂಡ್‌ನ ಆಹಾರ ಉತ್ಪನ್ನಗಳನ್ನು ಉದ್ಯಾನವನದ ಡಿಸಿಎಫ್&nbsp;ಕಾಜೋಲ್ ಅಜಿತ್ ಪಾಟೀಲ್ ಬಿಡುಗಡೆ ಮಾಡಿದರು.&nbsp;</p></div>

ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆರ್‌ಎಫ್‌ಒ ಕಚೇರಿಯಲ್ಲಿ ಆನೆಕಾಡು ಬ್ರ್ಯಾಂಡ್‌ನ ಆಹಾರ ಉತ್ಪನ್ನಗಳನ್ನು ಉದ್ಯಾನವನದ ಡಿಸಿಎಫ್ ಕಾಜೋಲ್ ಅಜಿತ್ ಪಾಟೀಲ್ ಬಿಡುಗಡೆ ಮಾಡಿದರು. 

   

ಕನಕಪುರ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವಂತಹ ಹಳ್ಳಿಗಳಲ್ಲಿ ಬೆಳೆದಿರುವಂತಹ ಆಹಾರ ಉತ್ಪನ್ನಗಳನ್ನು ಆನೆಕಾಡು ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಗ್ರಾಹಕರಿಗೆ ತಲುಪಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಆನೆಕಾಡು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ರಮದ ಉದ್ಘಾಟನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯುಲ್ಲಿರುವ ತಾಲ್ಲೂಕಿನ ಕೋಡಿಹಳ್ಳಿ ಆರ್‌ಎಫ್‌ಒ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಉದ್ಯಾನವನದ ಡಿಸಿಎಫ್ ಕಾಜೋಲ್ ಅಜಿತ್ ಪಾಟೀಲ್ ಅವರು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಬಳಿಕ ಮಾತನಾಡಿದ ಅವರು, ‘ಅರಣ್ಯದಂಚಿನ ಕೃಷಿ ಉತ್ಪನ್ನಗಳು ಉತ್ಕೃಷ್ಟ ಮತ್ತು ಆರೋಗ್ಯಕರವಾಗಿರುತ್ತವೆ. ಅದಕ್ಕಾಗಿ ಇಲ್ಲಿನ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯುತ್ತದೆ. ಅದಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ಕಲ್ಪಿಸಲು ಆನೆಕಾಡು ಫುಡ್ ಪ್ರಾಡಕ್ಟ್ ಬ್ರ್ಯಾಂಡ್‌ ಸೃಷ್ಟಿಸಲಾಗಿದೆ. ಇದರಿಂದ ಅರಣ್ಯದಂಚಿನ ರೈತರಿಗೆ ಹೆಚ್ಚಿನ ಉಪಯೋಗವಾಗಲಿದೆ’ ಎಂದರು.

‘ದೇಶದಲ್ಲಿ ಪ್ರಥಮ ಬಾರಿಗೆ ಆನೆಕಾಡು ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ. ಪರಿಸರ ಉಳಿವು, ಅರಣ್ಯ ರಕ್ಷಣೆ ಹಾಗೂ ಅರಣ್ಯದಂಚಿನ ಗ್ರಾಮಗಳ ಜನರ ಬದುಕು ಅಭಿವೃದ್ಧಿಗೊಳಿಸಲು ಈ ಒಂದು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ’ ಎಂದು ತಿಳಿಸಿದರು.

ಎಸಿಎಫ್ ಟಿ.ಎಂ. ರವಿಕುಮಾರ್ ಮಾತನಾಡಿ, ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪರಿಸರ ಸೂಕ್ಷ್ಮ ವಲಯದಲ್ಲಿ 77 ಗ್ರಾಮಗಳು ಮತ್ತು 16 ಹಾಡಿಗಳು ಬರುತ್ತವೆ. ಈ ಗ್ರಾಮಗಳಲ್ಲಿ ಈಗಲೂ ಸಾಂಪ್ರದಾಯಿಕ ಕೃಷಿಯನ್ನು ಮಾಡುತ್ತಿದ್ದು, ಇಲ್ಲಿನ ಆಹಾರ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿರುತ್ತವೆ’ ಎಂದು ಹೇಳಿದರು.

‘ಈ ಪ್ರದೇಶದ ಉತ್ಕೃಷ್ಟ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ರೂಪಿಸಿರುವ ಆನೆಕಾಡು ಬ್ರ್ಯಾಂಡ್‌ನ ಆಹಾರ ಉತ್ಪನ್ನಗಳ ಬಗ್ಗೆ ರೈತರಿಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇಲಾಖೆ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅದಕ್ಕೆ ರೈತರು ಸಹಕರಿಸಬೇಕು’ ಎಂದರು.

ಕೋಡಿಹಳ್ಳಿ ವನ್ಯಜೀವಿ ವಲಯದ ಆರ್‌ಎಫ್‌ಒ ಅಂಥೋನಿ ರೇಗೊ, ಡಿಆರ್‌ಎಫ್‌ಒ ನಾಗರಾಜು ಜಿ.ಎಂ, ಆನೆಕಾಡು ಫಾರ್ಮರ್ಸ್‌ ಗ್ರೂಪ್ ಅಧ್ಯಕ್ಷ ಮರಿಗೌಡ, ಕನಕಪುರ ಆರ್ಗ್ಯಾನಿಕ್‌ ಪ್ರೊಡ್ಯೂಸರ್ ಕಂಪನಿಯ ಸುಜಯ್, ಆನೆಪಡೆ ಕಾರ್ಯಪಡೆ ಆರ್‌ಎಫ್‌ಒ ಶ್ರೀಧರ್ ಎಸ್., ಗಸ್ತು ಅರಣ್ಯ ಪಾಲಕ ನಿಂಗಪ್ಪ ಡಿ., ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾಡಂಚಿನ ಗ್ರಾಮಗಳ ರೈತರು ಇದ್ದರು.

‘ಆನ್‌ಲೈನ್‌ನಲ್ಲೂ ಮಾರಾಟ’

‘ಆನೆಕಾಡು ಆಹಾರ ಉತ್ಪನ್ನಗಳನ್ನು ಆಫ್‌ಲೈನ್ ಜೊತೆಗೆ ಆನ್‌ಲೈನ್‌ನಲ್ಲೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಅಂಚೆ ಇಲಾಖೆಯಿಂದ ಗ್ರಾಹಕರಿಗೆ ಉತ್ಪನ್ನ ತಲುಪಿಲು ಒಪ್ಪಂದ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ. ಕಾಡಂಚಿನ ಗ್ರಾಮದ ರೈತರು ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಇದರ ಸದುಪಯೋಗ ಪಡೆಯಬೇಕು. ಅರಣ್ಯ ಪ್ರದೇಶವನ್ನು ವನ್ಯಜೀವಿ ವಲಯ ಎಂದು ಘೋಷಿಸಿದ ಬಳಿಕ ಒಂದು ಕಿ.ಮೀ. ವ್ಯಾಪ್ತಿಯ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಗಳಾಗಿವೆ. ಇಲ್ಲಿ ಕೃಷಿ ಹೊರತುಪಡಿಸಿ ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಕಾಜೋಲ್ ಅಜಿತ್ ಪಾಟೀಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.