ಮಾಗಡಿ: ‘ವಸತಿ ಇಲ್ಲದವರು ಗ್ರಾಮಸಭೆಗಳಲ್ಲಿ ಭಾಗವಹಿಸಿ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು’ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷ ಬೆಳ್ಳಿಯಪ್ಪ ತಿಳಿಸಿದರು.
ತಾಲ್ಲೂಕಿನ ಮತ್ತಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಗ್ರಾಮೀಣ ಭಾರತ ಅಭಿವೃದ್ಧಿ ಹೊಂದದ ಹೊರತು ದೇಶಕ್ಕೆ ಭವಿಷ್ಯವಿಲ್ಲ. ಗ್ರಾಮರಾಜ್ಯವೇ ರಾಮರಾಜ್ಯ ಎಂಬ ಗಾಂಧೀಜಿ ಅವರ ಕನಸು ನನಸಾಗುವುದು ಯಾವಾಗ? ಜನರು ಸಹ ಮೌಡ್ಯತೆಯನ್ನು ತ್ಯಜಿಸಿ, ಮನೆಯಿಂದ ಹೊರಗೆ ಬಂದು ಮಾಹಿತಿ ತಿಳಿದುಕೊಂಡು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
‘ಎಲ್ಲವನ್ನು ಸರ್ಕಾರವೇ ಮಾಡಬೇಕು ಎಂಬುದು ಸರಿಯಲ್ಲ. ನರೇಗಾ ಯೋಜನೆ ಗ್ರಾಮೀಣ ಜನತೆಗೆ ವರದಾನವಾಗಿದೆ. ಸದುಪಯೋಗಪಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಿಂದ ಹತ್ತಾರು ಸವಲತ್ತುಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು. ಗ್ರಾಮಸಭೆಗಳಿಗೆ ತಾಲ್ಲೂಕುಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರೇ ಬರದಿದ್ದರೆ ಏನು ಮಾಡುವುದು’ ಎಂದರು.
ನಿಯೋಜಿತ ಅಧಿಕಾರಿ ಕೃಷ್ಣಬಾಬು ಮಾತನಾಡಿ, ‘ರೈತರಿಗೆ ಪ್ರಧಾನಮಂತ್ರಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ₹ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ ₹ 4 ಸಾವಿರ ಹಣ ದೊರಯಲಿದೆ. ರೈತರು ಬಳಸಿಕೊಳ್ಳಬೇಕು’ ಎಂದು ಸಲಹೆ ನಿಡಿದರು.
ಪಿಡಿಒ ಕೃಷ್ಣಪ್ಪ, ಮುಖಂಡರಾದ ಕೋರಮಂಗಲ ಶ್ರೀನಿವಾಸ್. ಪ್ರಸಾದ್. ಉಪಾಧ್ಯಕ್ಷ ಜಿ. ಎಂ.ದೇವರಾಜು. ಸದಸ್ಯರಾದ ಎಂ. ಎಸ್. ಕೃಷ್ಣಪ್ಪ. ರೇಣುಕಮ್ಮ. ಜಿ. ವಿ. ಶಿವರಾಜು. ಶಿವರಾಜು. ಯಶೋದಮ್ಮ. ಬಿಲ್ ಕಲೆಕ್ಟರ್ ಮಹದೇವ್. ಮಂಜಣ್ಣ, ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.