
ರಾಮನಗರ: ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಅತ್ತಿಗೆಯನ್ನೇ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಮೈದುನನಿಗೆ, ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿದೆ. ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿಯ ಅತ್ತಿಂಗೆರೆ ಗ್ರಾಮದ ಗಂಗಮುತ್ತಯ್ಯ ಅಲಿಯಾಸ್ ಗಂಗರಾಜು (28) ಶಿಕ್ಷೆಗೊಳಗಾದ ಅಪರಾಧಿ.
ಠಾಣೆ ವ್ಯಾಪ್ತಿಯ ಚನ್ನೇನಹಳ್ಳಿಯ ನಿವಾಸಿ ಶಾಂತಮ್ಮ ಅವರು ಕೆಂಪರಾಜು ಎಂಬುವರನ್ನು ಎರಡನೇ ಮದುವೆಯಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2015ರ ನ. 23ರಂದು ಸಂಜೆ ಮನೆಗೆ ತನ್ನ ಸಹಚರನೊಂದಿಗೆ ಅಣ್ಣನ ಮನೆಗೆ ಬಂದಿದ್ದ ಗಂಗಮುತ್ತಯ್ಯ, ಕೆಂಪರಾಜು ಎಲ್ಲಿ ಎಂದು ಕೇಳಿ ಶಾಂತಮ್ಮ ಜೊತೆ ಜಗಳ ತೆಗೆದಿದ್ದ.
ನಂತರ ತನ್ನ ಬಳಿ ಇದ್ದ ಮಚ್ಚಿನಿಂದ ಏಕಾಏಕಿ ಶಾಂತಮ್ಮ ಅವರ ಕೈ, ಕಾಲು ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆಗೆ ಯತ್ನಿಸಿದ್ದ. ಹಲ್ಲೆಯಿಂದಾಗಿ ಶಾಂತಮ್ಮ ಜೋರಾಗಿ ಕೂಗಿಕೊಂಡಾಗ, ಅಕ್ಕಪಕ್ಕದವರು ಕೂಡಲೇ ಸ್ಥಳಕ್ಕೆ ಜಮಾಯಿಸಿದರು. ಅಷ್ಟರೊಳಗೆ ಆರೋಪಿ ಪರಾರಿಯಾಗಿದ್ದ. ಮಚ್ಚೇಟಿನಿಂದ ಗಾಯಗೊಂಡಿದ್ದ ಶಾಂತಮ್ಮ ಅವರನ್ನು ಪತಿ ಕೆಂಪರಾಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಶಾಂತಮ್ಮ ಅವರು ನೀಡಿದ ದೂರಿನ ಮೇರೆಗೆ ಗಂಗಮುತ್ತಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಂದಿನ ತನಿಖಾಧಿಕಾರಿ ಪಿಎಸ್ಐ ರವಿ ಪ್ರಕರಣದ ವಿಚಾರಣೆ ನಡೆಸಿ ಸಾಕ್ಷ್ಯ ಸಮೇತ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಮುತ್ತಯ್ಯನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು.
ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕಿ ವಾಸವಿ ಅಂಗಡಿ ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಕೋರ್ಟ್ ಸಿಬ್ಬಂದಿ ಶಿವರಾಜ್ ಕುಮಾರ್, ಬಾಬು ನಾಯಕ್ ಅವರು ಸಾಕ್ಷಿದಾರರನನ್ನು ಕೋರ್ಟ್ಗೆ ಹಾಜರುಪಡಿಸಿ, ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದ್ದರು.
ಚಿನ್ನಾಭರಣ ಕಳ್ಳತನ: ಮಹಿಳೆ ಬಂಧನ
ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಾತಗುಣಿ ಸಮೀಪದ ತಿಮ್ಮರಾಯಪ್ಪ ಲೇಔಟ್ನ ಮನೆಯಲ್ಲಿ ನಡೆದಿದ್ದ ಸುಮಾರು ₹13 ಲಕ್ಷ ಮೌಲ್ಯದ 121 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆ ಕುಸುಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾಗ್ಯ ಎಂಬುವರು ಹೊಸ ಮನೆ ನಿರ್ಮಿಸಿ ಗೃಹ ಪ್ರವೇಶ ಮಾಡಿದ್ದರು. ಮನೆಯ ಮೊದಲ ಮಹಡಿಯಲ್ಲಿ ಆರೋಪಿ ಕುಸುಮ ಬಾಡಿಗೆಗೆ ಇದ್ದಳು. ನ. 28ರಂದು ಭಾಗ್ಯ ಅವರ ಸ್ಕೂಟರ್ ಅನ್ನು ಭಾಗ್ಯ ತೆಗೆದುಕೊಂಡು ಹೋಗಿದ್ದಳು. ಅನ್ಯ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದ ಭಾಗ್ಯ ಅವರು ತಮ್ಮ ಸ್ಕೂಟರ್ನಲ್ಲಿ ಮನೆ ಕೀ ಇಟ್ಟಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದ ಭಾಗ್ಯ ಅವರು ಮನೆಗೆ ಬಂದು ನೋಡಿದಾಗ ತಮ್ಮ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ ಕಾಣೆಯಾಗಿದ್ದವು.
ಕುಸುಮ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಭಾಗ್ಯ ಅವರು ಠಾಣೆಗೆ ದೂರು ಕೊಟ್ಟಿದ್ದರು. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಕುಸುಮ ಅವರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಚಿನ್ನಾಭರಣ ಕದ್ದಿರುವುದಾಗಿ ಒಪ್ಪಿಕೊಂಡರು. ಬಳಿಕ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.