ADVERTISEMENT

ಬಕ್ರೀದ್‌ ಹಬ್ಬ: ಶಾಂತಿಸಭೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:33 IST
Last Updated 7 ಆಗಸ್ಟ್ 2019, 14:33 IST
ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಿ.ಕೃಷ್ಣಕುಮಾರ್‌ ಮಾತನಾಡಿದರು
ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಿ.ಕೃಷ್ಣಕುಮಾರ್‌ ಮಾತನಾಡಿದರು   

ಕೋಡಿಹಳ್ಳಿ (ಕನಕಪುರ): ಆಗಸ್ಟ್‌ 12 ರಂದು ನಡೆಯುವ ಬಕ್ರೀದ್‌ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಣೆ ಮಾಡಬೇಕೆಂದು ಕೋಡಿಹಳ್ಳಿ ಸಬ್‌ ಇನ್‌ಸ್ಪೆಕ್ಟರ್‌ ಸಿ.ಕೃಷ್ಣಕುಮಾರ್‌ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಹಿಂದೂ ಮತ್ತು ಮುಸ್ಲಿಂ ಧರ್ಮದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಮಾತನಾಡಿದರು.

ಧಾರ್ಮಿಕವಾಗಿ ನಡೆಯುವ ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡೂ ಧರ್ಮದ ಮುಖಂಡರು ಎಚ್ಚರ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಹೂಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಮೀರ್‌ ಅಹಮ್ಮದ್‌ ಮಾತನಾಡಿ, ‘ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಮುಳ್ಳಹಳ್ಳಿ, ಹೂಕುಂದ, ಕೊಕ್ಕರೆಹೊಸಳ್ಳಿ, ರಾಂಪುರದೊಡ್ಡಿ, ಹುಣಸನಹಳ್ಳಿ, ಹೊಸದುರ್ಗ, ಐ.ಗೊಲ್ಲಹಳ್ಳಿ, ಕೋಡಿಹಳ್ಳಿ ಗ್ರಾಮಗಳಲ್ಲಿ ಹೆಚ್ಚಾಗಿ ಮುಸಲ್ಮಾನರು ವಾಸಿಸುತ್ತಿದ್ದು ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಸೌಹಾರ್ದದಿಂದ ಆಚರಿಸಿಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.

‘ನಮ್ಮ ಹಬ್ಬಗಳ ಆಚರಣೆಗೆ ಹಿಂದೂ ಬಾಂಧವರು ಅತ್ಯಂತ ಸ್ನೇಹಪೂರ್ವಕವಾಗಿ ನಮಗೆ ಸಹಕಾರ ಕೊಡುತ್ತಾ ಬಂದಿದ್ದಾರೆ. ನಾವು ಅವರ ಪ್ರೀತಿಪಾತ್ರರಾಗಿದ್ದೇವೆ. ಇಲ್ಲಿಯವರೆಗೂ ಯಾವ ಧರ್ಮೀಯ ಸಂಘರ್ಷಗಳಾಗಿಲ್ಲ. ಎಲ್ಲರೂ ಅನೋನ್ಯವಾಗಿದ್ದೇವೆ. ಮುಂದೆಯೂ ಅದೇ ರೀತಿ ಪ್ರೀತಿ ಪಾತ್ರರಾಗಿ ಎರಡೂ ಧರ್ಮೀಯರು ಹಬ್ಬ ಆಚರಣೆಗಳನ್ನು ಮಾಡುತ್ತೇವೆ’ ಎಂದು ತಿಳಿಸಿದರು.

ಮುಖಂಡರಾದ ಲೋಕೇಶ್‌, ಕೆಬ್ಬಳ್ಳಿ ಸತೀಶ್‌, ಚಂದ್ರು, ಮುನಿಯಪ್ಪ, ಇಂದಿರಾನಗರ ಮೌಲಾ ಭಾಯಿ, ಪರೀದ್‌ಸಾಬ್‌ ಅಬೀದ್‌, ಅನ್ವರ್‌ಸಾಬ್‌,ಐ.ಗೊಲ್ಲಹಳ್ಳಿ, ಹೊಸದುರ್ಗ, ಹುಣಸನಹಳ್ಳಿ, ರಾಂಪುರದೊಡ್ಡಿ ಗ್ರಾಮದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.