ರಾಮನಗರ: ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ ನಡೆಯುವುದು ಖಚಿತ. ರಾಜ್ಯದ ಕನ್ನಡ ಪರ ಸಂಘಟನೆಗಳೂ ಸೇರಿದಂತೆ 1100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.
ನಗರದ ಐಜೂರು ವೃತ್ತದಲ್ಲಿ ಶನಿವಾರ ಬೆಂಗಳೂರು ಮೈಸೂರು ರಾಷ್ಠ್ರೀಯ ಹೆದ್ದಾರಿಯಲ್ಲಿ ಗೋಣಿ ಚೀಲದ ಮೇಲೆ ಮಲಗಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶೇ 100 ರಷ್ಟು ಕನ್ನಡಿಗರಿದ್ದಾರೆ, ತಮಿಳುನಾಡಿನ ತಾಳವಾಡಿಯಲ್ಲಿ ಕನ್ನಡಿಗರಿದ್ದಾರೆ, ಕೇರಳದ ಕಾಸರಗೂಡಿನಲ್ಲಿ ಕನ್ನಡಿಗರಿದ್ದಾರೆ, ಆದರೆ ಆ ರಾಜ್ಯದಲ್ಲಿ ಕನ್ನಡಿಗರಿಗಾಗಿ ಅಭಿವೃದ್ದಿ ಪ್ರಾಧಿಕಾರವಿಲ್ಲ, ಹೀಗಾಗಿ ರಾಜ್ಯದಲ್ಲಿ ಮರಾಠಿಗರಿಗಾಗಿ ಅಭಿವೃದ್ದಿ ಪ್ರಾಧಿಕಾರ ಏಕೆ ಎಂದು ಅವರು ಪ್ರಶ್ನಿಸಿದರು.
ಡಿ.5ರ ಕರ್ನಾಟಕ ಬಂದ್ ಅಂಗವಾಗಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗುವುದು, ಪ್ರತಿಭಟನಾಕಾರರನ್ನು ಸರ್ಕಾರ ಜೈಲಿಗೆ ತಳ್ಳಿದರೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು. ಜಿಲ್ಲೆಯ ಜನರು ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿದರು. ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾ ಅಧ್ಯಕ್ಷ ಜಯಕುಮಾರ್, ಗಾಯತ್ರಿ ಬಾಯಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.