ರಾಮನಗರ: ವಿದ್ಯುತ್ ಕಂಬದಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು, ವರ್ಷದಿಂದ ಹಾಸಿಗೆ ಹಿಡಿದಿದ್ದ ಹೊರಗುತ್ತಿಗೆ ನೌಕರ ಚಿಕಿತ್ಸೆಗೆ ಸ್ಪಂದಿಸಿದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ನೌಕರನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕುಟುಂಬದವರು ಮತ್ತು ಗ್ರಾಮಸ್ಥರು ನಗರದಲ್ಲಿರುವ ರಾಮನಗರ ವಿಭಾಗದ ಬೆಸ್ಕಾಂ ಇಇ ಕಚೇರಿ ಎದುರು ಸಂಜೆ ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಸೂರ್ಯಕುಮಾರ್ (43) ಮೃತರು. ಅವರಿಗೆ ತಂದೆ–ತಾಯಿ, ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಹೊರಗುತ್ತಿಗೆ ಏಜೆನ್ಸಿ ಮೂಲಕ ಗ್ಯಾಂಗ್ಮನ್ ಆಗಿ ಬಿಡಿದಯಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯಕುಮಾರ್, ವಿದ್ಯುತ್ ಪರಿವರ್ತಕ ಅಳವಡಿಸುವಾಗ ಕಂಬದಿಂದ ಬಿದಿದ್ದರು. ಇದರಿಂದಾಗಿ, ಸೊಂಟದಿಂದ ಕೆಳಕ್ಕೆ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದರು.
ಈಗಾಗಲೇ ಪರಿಹಾರ ಪಾವತಿ
ಸೂರ್ಯಕುಮಾರ್ ಅವರು ಕಂಬದಿಂದ ಬಿದ್ದು ಗಾಯಗೊಂಡಾಗಲೇ ಅವರು ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ಏಜೆನ್ಸಿಯು ಪರಿಹಾರದ ಜೊತೆಗೆ ಚಿಕಿತ್ಸಾ ವೆಚ್ಚಕ್ಕೂ ಸಹಾಯ ಮಾಡಿದೆ. ಇದೀಗ ಅವರು ಮೃತಪಟ್ಟಿರುವುದರಿಂದ ಮತ್ತಷ್ಟು ಪರಿಹಾರದ ಜೊತೆಗೆ ಕುಟುಂಬದ ಒಬ್ಬರಿಗೆ ಉದ್ಯೋಗಕ್ಕೆ ಬೇಡಿಕೆ ಇಟ್ಟಿದ್ದಾರೆ. ಏಜೆನ್ಸಿಯಿಂದ ಅವರ ಪತ್ನಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.