ADVERTISEMENT

ಬಿಡದಿ ಸಮಗ್ರ ಉಪನಗರ ಸರ್ವೆಗೆ ಬಿಡಲ್ಲ; ಸೆ. 11ರಿಂದ ಮತ್ತೆ ಪ್ರತಿಭಟನೆ: ರೈತರು

ಉಪನಗರ ಭೂ ಸ್ವಾಧೀನಕ್ಕೆ ವಿರೋಧ: ತೆಂಗಿನಮರಕ್ಕೆ ಹಾಲೆರೆದು ಪ್ರತಿಭಟನಾ ಸಭೆ ನಡೆಸಿದ ರೈತರು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:45 IST
Last Updated 8 ಸೆಪ್ಟೆಂಬರ್ 2025, 2:45 IST
ಬಿಡದಿ ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ಬಿಡದಿ ಹೋಬಳಿಯ ಹೊಸೂರಿನ ಮದ್ದೂರಮ್ಮ ಮತ್ತು ಬಿಸಿಲಮ್ಮ ದೇವಿಯ ತೋಪಿನಲ್ಲಿ ಭಾನುವಾರ ನಡೆದ ಪ್ರತಿಭಟನಾ ಸಭೆಯನ್ನು ರೈತ ಮುಖಂಡರು ತೆಂಗಿನಮರಕ್ಕೆ ಹಾಲೆರೆಯುವ ಮೂಲಕ ಆರಂಭಿಸಿದರು
ಬಿಡದಿ ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ಬಿಡದಿ ಹೋಬಳಿಯ ಹೊಸೂರಿನ ಮದ್ದೂರಮ್ಮ ಮತ್ತು ಬಿಸಿಲಮ್ಮ ದೇವಿಯ ತೋಪಿನಲ್ಲಿ ಭಾನುವಾರ ನಡೆದ ಪ್ರತಿಭಟನಾ ಸಭೆಯನ್ನು ರೈತ ಮುಖಂಡರು ತೆಂಗಿನಮರಕ್ಕೆ ಹಾಲೆರೆಯುವ ಮೂಲಕ ಆರಂಭಿಸಿದರು   

ಬಿಡದಿ (ರಾಮನಗರ): ಬಿಡದಿ ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು, ಯೋಜನಾ ಪ್ರದೇಶದಲ್ಲಿ ಭೂ ಸ್ವಾಧೀನದ ಸರ್ವೆಗಾಗಿ ಅಧಿಕಾರಿಗಳನ್ನು ನಮ್ಮ ಜಮೀನಿಗೆ ಕಾಲಿಡಲು ಬಿಡುವುದಿಲ್ಲ. ಯೋಜನೆಯಿಂದ ನಮ್ಮ ಗ್ರಾಮಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಸೆ. 11ರಿಂದ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಯೋಜನಾ ವ್ಯಾಪ್ತಿಯ ಹೊಸೂರಿನ ಮದ್ದೂರಮ್ಮ ಮತ್ತು ಬಿಸಿಲಮ್ಮ ದೇವಿಯ ತೋಪಿನಲ್ಲಿ ಭಾನುವಾರ ಜಮಾಯಿಸಿದ ರೈತರು, ತೆಂಗಿನ ಮರಕ್ಕೆ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನಾ ಸಭೆ ನಡೆಸಿದರು. ಮುಂದಿನ ಹೋರಾಟದ ರೂಪುರೇಷೆಗಳ ಕುರಿತು, ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಭೂ ಸ್ವಾಧೀನವಾಗುವ ಜಮೀನಿನಲ್ಲಿರುವ ಕಲ್ಪವೃಕ್ಷ ತೆಂಗಿನಮರಗಳನ್ನು ಕಡಿಯುವವರು ನಾಶವಾಗಿ ಹೋಗುತ್ತಾರೆ. ಅಂತಹವರಿಗೆ ಈ ದೇವಿ ಶಿಕ್ಷೆ ನೀಡಲಿ ಎಂದು ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೆ. 5ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುವಾಗ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ, ಯೋಜನೆಗೆ ಶೇ 70ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆ ಎಂಬ ಹೇಳಿಕೆ ಖಂಡಿಸಿದರು.

ADVERTISEMENT

ರೈತರು ಒಪ್ಪಿಗೆ ನೀಡಿದ್ದಾರೊ, ಇಲ್ಲವೊ ಎಂಬುದನ್ನು ರೈತರ ಬಹಿರಂಗ ಸಭೆ ನಡೆಸಿ ತೀರ್ಮಾನಿಸಲಿ ಎಂದು ಸವಾಲು ಹಾಕಿದರು. ನಾ ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿಲ್ಲ. ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಲು, ನಮ್ಮ ಬದುಕಿನ ಹಕ್ಕಿಹಾಗಿ ಹೋರಾಟ ಮಾಡುತ್ತಿದ್ದೇವೆ. ಪ್ರತಿಟನೆಯ ವೇಳೆ ರೈತರ ಮೇಲೆ ಹರಿಹಾಯ್ದ ಡಿಸಿಎಂ ನಡೆ ಸರಿಯಲ್ಲ. ಈ ಕುರಿತು, ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟಾಚಲಯ್ಯ, ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್, ರೈತಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ಭೈರಮಂಗಲ ಮತ್ತು ಕಂಚುಗಾರನಹಳ್ಳಿ ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ಕೆ. ರಾಮಯ್ಯ, ಮುಖಂಡರಾದ ಶ್ರೀನಿವಾಸ್ ರೆಡ್ಡಿ, ಮಂಡಲಹಳ್ಳಿ ನಾಗರಾಜು ರೇವಣ್ಣ, ಸುಜಾತ, ಸೌಮ್ಯ, ತಾಯಮ್ಮ, ಚೆನ್ನಮ್ಮ ಹಾಗೂಊ ಇತರರು ಇದ್ದರು.

ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ರೈತರು

ಭೂಮಿ ಬೆಲೆ ಹೆಚ್ಚಿಸಿಕೊಳ್ಳಲು ಸ್ವಾಗತ’

ಯೋಜನೆಯನ್ನು ಸ್ವಾಗತಿಸಿರುವ ರೈತರ ಮುಖಂಡರ ಕುರಿತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಸರ್ಕಾರದ ನಿಲುವನ್ನು ಖಾಸಗಿ ಕ್ಲಬ್‌ನಲ್ಲಿ ಕುಳಿತು ಸ್ವಾಗತಿಸಿರುವವರು ದೊಡ್ಡ ರೈತರು. ತಮ್ಮ ಜಮೀನಿನ ಬೆಲೆ ಹೆಚ್ಚಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರು. ಅವರಿಗೆ ಬೇರೆ ಬೇರೆ ಮೂಲದಿಂದ ಆದಾಯವಿದೆ. ಆದರೆ ಇಲ್ಲಿ ಹೋರಾಟ ಮಾಡುತ್ತಿರುವವರು ಸಣ್ಣ ಭೂಮಿ ಹೊಂದಿದ್ದು ಅವರಿಗೆ ಕೃಷಿ ಬಿಟ್ಟರೆ ಬೇರೆ ಗೊತ್ತಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟ ಸಮಿತಿಯಿಂದ 4ನೇ ಹಂತದ ಹೋರಾಟ ನಡೆಸಲಾಗುವುದು. ಅದಕ್ಕೆ ಪರಿಸರವಾದಿಗಳು ಹಾಗೂ ಸಮಾನ ಮನಸ್ಕ ರಾಜಕಾರಣಿಗಳ ಬೆಂಬಲ ಪಡೆದು ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು. ಯೋಜನೆಯಿಂದಾಗು ಪರಿಸರ ಹಾನಿಯ ಬಗ್ಗೆ ಕೇಂದ್ರ ಸರ್ಕಾರದ ಹಸಿರು ಪೀಠದ ಮೆಟ್ಟಿಲೇರಲಾಗುವುದು. ಇದರ ಜೊತೆಗೆ ಕಾನೂನಾತ್ಮಕ ಹೋರಾಟ ಸಹ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.