ADVERTISEMENT

ಬಿಡದಿ | ಬೆಂಕಿ ಅವಘಡ: ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಕಾರ್ಮಿಕರು ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 20:03 IST
Last Updated 10 ಅಕ್ಟೋಬರ್ 2025, 20:03 IST
ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ಗೆ ಭೇಟಿ ನೀಡಿದ್ದ ಬಿಡದಿ ಠಾಣೆ ಪೊಲೀಸರು
ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ಗೆ ಭೇಟಿ ನೀಡಿದ್ದ ಬಿಡದಿ ಠಾಣೆ ಪೊಲೀಸರು   

ಬಿಡದಿ (ರಾಮನಗರ): ಇಲ್ಲಿನ ಭೀಮೇನಹಳ್ಳಿಯ ಕೈಗಾರಿಕಾ ಪ್ರದೇಶದ ಕಾರ್ಮಿಕರ ಶೆಡ್‌ನಲ್ಲಿ ಅಡುಗೆ ಅನಿಲ ಸೋರಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಏಳು ಕಾರ್ಮಿಕರ ಪೈಕಿ ನಾಲ್ವರು ಶುಕ್ರವಾರ ಮೃತಪಟ್ಟಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕರಾದ ಜಾವೆದ್ ಅಲಿ, ಶಫಿಜುಲ್ ಶೇಕ್, ಮನ್ರುಲ್ ಶೇಕ್ ಹಾಗೂ ಜಿಯಾಬುರ್ ಶೇಕ್ ಮೃತರು. ತಜ್ಬುಲ್ ಶೇಕ್, ಹಸನ್ ಮಲಿಕ್, ನೂರ್ ಜಮಲ್ ಸ್ಥಿತಿ ಗಂಭೀರವಾಗಿದ್ದು, ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 

ಮಲಗಿದ್ದಾಗ ಘಟನೆ: ಭೀಮೇನಹಳ್ಳಿಯಲ್ಲಿರುವ ಎಲಿಗೆನ್ಸ್ ಲೇಔಟ್‌ನಲ್ಲಿ ವಿಲಾಸಿ ವಿಲ್ಲಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು, ಸಮೀಪದಲ್ಲೇ ತಾತ್ಕಾಲಿಕ ಶೆಡ್‌ನಲ್ಲಿ ತಂಗಿದ್ದರು. ಅ.6ರಂದು ಶೆಡ್‌ನಲ್ಲಿದ್ದ ಸಿಲಿಂಡರ್ ಅನ್ನು ಬದಲಾಯಿಸಿಕೊಂಡು ಬಂದಿದ್ದರು.

ADVERTISEMENT

ರಾತ್ರಿ ಶೆಡ್‌ನಲ್ಲೇ ಅಡುಗೆ ಮಾಡಿದ್ದ ಕಾರ್ಮಿಕರು ಸಿಲಿಂಡರ್‌ ಸರಿಯಾಗಿ ಬಂದ್ ಮಾಡಿರಲಿಲ್ಲ. ಇದರಿಂದಾಗಿ ಅನಿಲ ಸೋರಿತ್ತು. ನಸುಕಿನಲ್ಲಿ 2 ಗಂಟೆ ಸುಮಾರಿಗೆ ಎದ್ದಿದ್ದ ಕಾರ್ಮಿಕನೊಬ್ಬ, ಬೀಡಿ ಸೇದಲು ಬೆಂಕಿ ಕಡ್ಡಿ ಗೀರುತ್ತಿದ್ದಂತೆ ಶೆಡ್‌ನೊಳಗೆ ಬೆಂಕಿ ವ್ಯಾಪಿಸಿ ಅವಘಡ ಸಂಭವಿಸಿತ್ತು.

ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ಕಾರ್ಮಿಕರ ಕಂಟ್ರ್ಯಾಕ್ಟರ್ ಹಸನ್ ಮಲಿಕ್, ಎಲಿಗೆನ್ಸ್ ಲೇಔಟ್ ಮಾಲೀಕ, ಜಮೀನಿನ ಮಾಲೀಕ ಹಾಗೂ ಶೆಡ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.