
ಮಾಗಡಿ: ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ಚರ್ಚೆ ಮಾಡಲು ಸಿದ್ಧ ಎಂದು ಶಾಸಕ ಬಾಲಕೃಷ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರಕ್ಕೆ ಆದರೂ ಬನ್ನಿ, ಬಿಡದಿಗೆ ಆದರೂ ಬನ್ನಿ. ಚರ್ಚೆಗೆ ಸಿದ್ಧ. ದಿನಾಂಕ ಮತ್ತು ಸಮಯ ನಿಗದಿ ಮಾಡಿದರೆ ಚರ್ಚೆಗೆ ರೆಡಿ’ ಎಂದರು.
‘ಈ ಯೋಜನೆ ಯಾರ ಪಾಪದ ಕೂಸು ಎಂದು ಎಚ್ಡಿಕೆ ಸ್ಪಷ್ಟಪಡಿಸಲಿ. ಜನರನ್ನು ಯಾವಾಗಲೂ ಮೋಸ ಮಾಡಲು ಆಗಲ್ಲ. ನೈಸ್ ಆಗಿ ಮಾತಾಡಿಕೊಂಡು, ಒಂದೊಂದು ಬಾರಿ ಒಂದೊಂದು ಹೇಳಿಕೆ ಕೊಡೋದು ಬೇಡ. ಹಿಂದೆ ನಾನೇ ಭೂಸ್ವಾಧೀನ ಮಾಡಿದ್ದೆ ಅಂತ ಅವರೇ ಹೇಳಿದ್ದಾರೆ. ಈಗ ಹೋಗಿ ಜನರಿಗೆ ಟೋಪಿ ಹಾಕೋ ಕೆಲಸ ಮಾಡುತ್ತಿದ್ದಾರೆ. ಇವತ್ತು ಈ ಕಮಿಟ್ ಮೆಂಟ್ ಇರುವವರು ಎರಡನೇ ಬಾರಿ ಸಿಎಂ ಆದಾಗ ಯೋಜನೆ ಯಾಕೆ ಕೈಬಿಡಲಿಲ್ಲ’.
‘ಜನ ಕೇಳ್ದಾಗ ನನ್ನ ಕನಸ್ಸಿನ ಯೋಜನೆ ನಾನು ಮಾಡೇ ಮಾಡ್ತೀನಿ ಅಂದರು. ಎಲ್ಲವೂ ಚರ್ಚೆ ಆಗಲಿ.
ಎರಡನೇ ಬಾರಿ ಸಿಎಂ ಆದಾಗ; ಅವರದ್ದೇ ಶಾಸಕ ಇದ್ದಾಗ ನೀವು ಏನು ಮಾಡಿದ್ರಿ? ನಾವು, ನಮ್ಮ ನಾಯಕರು ಎಲ್ಲರೂ ಚರ್ಚೆಗೆ ಸಿದ್ಧರಿದ್ದೇವೆ‘ ಎಂದು ಪಂಥಾಹ್ವಾನ ನೀಡಿದರು.