ಮಾಗಡಿ: ರೈತ ನಾಯಕ ಪ್ರೊ.ಎಂ.ನಂಜುಂಡ ಸ್ವಾಮಿ ಅವರ 84ನೇ ಜನ್ಮದಿನವನ್ನು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು.
ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಪ್ರೊ.ಎಂ.ನಂಜುಂಡ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ಕಾಲೇಜಿನಲ್ಲಿ ಭೋದನೆ ಮಾಡುತ್ತಿದ್ದ ಪ್ರೊ.ಎಂ.ನಂಜುಂಡ ಸ್ವಾಮಿ ರೈತ ಕುಟುಂಬದಿಂದ ಬಂದವರು. ರೈತರು ಅನುಭವಿಸುತ್ತಿದ್ದ ಕಷ್ಟಗಳನ್ನು ಅರ್ಥ ಮಾಡಿಕೊಂಡು ಲೇಖಕ ಪೂರ್ಣಚಂದ್ರ ತೇಜಸ್ವಿ, ಸುಂದರೇಶ್ ಅವರಂತಹ ನಿಸ್ವಾರ್ಥ ನಾಯಕರೊಂದಿಗೆ ರೈತ ಸಂಘ ಕಟ್ಟಿ, ಹೋರಾಟ ನಡೆಸಿದರು. ಪತ್ರಕರ್ತ ಪಿ.ಲಂಕೇಶ್ ಅವರೊಂದಿಗೆ ಸೇರಿ ರೈತರಿಗಾಗಿ ಬೃಹತ್ ಹೋರಾಟ ನಡೆಸಿದರು’ ಎಂದು ಹೇಳಿದರು.
‘ನರಗುಂದ ನವಲಗುಂದ ರೈತರ ಮೇಲೆ ನಡೆದ ಸರ್ಕಾರಿ ದೌರ್ಜನ್ಯದ ವಿರುದ್ಧ ಹೋರಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ರೈತರಲ್ಲಿ ಹೋರಾಟದ ಕಿಚ್ಚು ತುಂಬಿದ ಧೀಮಂತ ನಾಯಕ. ಮಂಡ್ಯದ ರೈತ ಮುಖಂಡ ಪುಟ್ಟಣ್ಣಯ್ಯ, ಪ್ರೊ.ನಂಜುಂಡ ಸ್ವಾಮಿ ಅವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಹೋರಾಟ ನಡೆಸಿದ್ದರು. ಪ್ರೊ.ನಂಜುಂಡ ಸ್ವಾಮಿ ಅವರು ಎತ್ತಿದ್ದ ರೈತರ ಸಮಸ್ಯೆಗಳು ಬಗೆಹರಿದಿಲ್ಲ. ಅಸಂಘಟಿತ ರೈತರು ಅನ್ಯಾಯಕ್ಕೆ ಒಳಗಾಗುತ್ತಲೇ ಇದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕಸಬಾ ಹೋಬಳಿ ರೈತ ಸಂಘದ ಅಧ್ಯಕ್ಷ ಗೊಲ್ಲರಹಟ್ಟಿ ಜಯಣ್ಣ, ರೈತ ಯುವ ಮುಖಂಡರಾದ ಶ್ರೀನಿವಾಸ್, ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಮಧುಗೌಡ, ಕಾರ್ಯದರ್ಶಿ ಮಂಜುನಾಥ, ರಂಗಪ್ಪ, ಗಿರಿಧರ್, ಯೋಗೀಶ್, ಗಿರೀಶ್, ಹರೀಶ್, ಲೋಕೇಶ್, ಮಾಯಣ್ಣ ಪ್ರೊ.ನಂಜುಂಡ ಸ್ವಾಮಿ ಅವರ ರೈತಪರ ಹೋರಾಟದ ಘಟನೆಗಳನ್ನು ಸ್ಮರಿಸಿದರು. ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.