
ಹಾರೋಹಳ್ಳಿ: ತಾಲ್ಲೂಕಿನ ಟಿ.ಹೊಸಹಳ್ಳಿಯ ತೋಟದ ಮನೆಯೊಂದರಲ್ಲಿ ಜೀತಕ್ಕಿದ್ದ ನಾಲ್ವರು ಕಾರ್ಮಿಕರು ಹಾಗೂ ಮೂವರು ಮಕ್ಕಳನ್ನು ತಹಸೀಲ್ದಾರ್ ನೇತೃತ್ವದ ತಂಡ ಮಂಗಳವಾರ ರಕ್ಷಿಸಿದೆ. ಸಂತ್ರಸ್ತ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ತಮಿಳುನಾಡಿನ ಧರ್ಮಪುರಿ ಮೂಲದ ಮಾದೇಶ(30),ಮಾದಮ್ಮ(26),ಮುನಿಯಪ್ಪ(28),ಮುನಿಯಮ್ಮ(24) ಹಾಗೂ ಮೂವರು ಮಕ್ಕಳನ್ನು ರಕ್ಷಿಸಲಾಗಿದೆ. ಜೀತ ಕಾರ್ಮಿಕರ ಬಗ್ಗೆ ತಹಸೀಲ್ದಾರ್ಗೆ ದೂರು ಬಂದಿತ್ತು.
ಕಾರ್ಮಿಕರ ವೇತನದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಜೀತಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಉಪ ವಿಭಾಗಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಹಸೀಲ್ದಾರ್ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಕಾರ್ಮಿಕ ಅಧಿಕಾರಿ ಚಂದ್ರು, ಜೀಶನ್, ರಾಜಸ್ವ ನಿರೀಕ್ಷಕ ಪ್ರಕಾಶ್ ದಾಳಿಯಲ್ಲಿ ಭಾಗವಹಿಸಿದ್ದರು.